Publish Date: Wed, 02 Apr 2025 (09:05 IST)
Updated Date: Wed, 02 Apr 2025 (09:08 IST)
ಬೆಂಗಳೂರು: ಕರ್ನಾಟಕ ಈ ಮೂರು ಜಿಲ್ಲೆಗಳಲ್ಲಿ ಇಂದು ಮಳೆಯ ಸಾಧ್ಯತೆಯಿದೆ ಎಂದು ಹವಾಮಾನ ವರದಿಗಳು ಹೇಳುತ್ತಿವೆ. ಯಾವೆಲ್ಲಾ ಜಿಲ್ಲೆಗಳಲ್ಲಿ ಮಳೆಯಿರಲಿದೆ ಇಲ್ಲಿದೆ ವಿವರ.
ಕರ್ನಾಟಕದಲ್ಲಿ ಕಳೆದ ನಾಲ್ಕೈದು ದಿನಗಳಿಂದ ವಿಪರೀತ ಬಿಸಿಲಿನ ವಾತಾವರಣವಿತ್ತು. ಆದರೆ ನಿನ್ನೆಯಿಂದ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಬಿಸಿಲಿನ ಝಳ ಕಡಿಮೆಯಾಗಿದ್ದು ಮೋಡ ಕವಿದ ವಾತಾವರಣ ಕಂಡುಬರುತ್ತಿದೆ.
ಇದರಿಂದಾಗಿ ಬೆಂಗಳೂರಿಗರಿಗೆ ಮಳೆಯ ಆಶಾಭಾವನೆ ಶುರುವಾಗಿದೆ. ಆದರೆ ನಿನ್ನೆ ಮೋಡ ಕವಿದ ವಾತಾವರಣವಿದ್ದರೂ ಮಳೆಯಿರಲಿಲ್ಲ. ಇಂದೂ ಬೆಂಗಳೂರಿನಲ್ಲಿ ಅದೇ ರೀತಿಯ ವಾತಾವರಣ ಮುಂದುವರಿಯಲಿದೆ. ಗರಿಷ್ಠ ತಾಪಮಾನ ಇಂದು 31 ಡಿಗ್ರಿಗೆ ಇಳಿಕೆಯಾಗಲಿದೆ.
ಆದರೆ ಕರಾವಳಿ ಜಿಲ್ಲೆಯಾದ ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳಿಗೆ ಇಂದು ಮಳೆಯಾಗುವ ಸೂಚನೆಯಿದೆ. ಅದರಲ್ಲೂ ದಕ್ಷಿಣ ಕನ್ನಡದಲ್ಲಿ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ. ಉಳಿದ ಜಿಲ್ಲೆಗಳಲ್ಲಿ ಬಹುತೇಕ ಮೋಡ ಮತ್ತು ಬಿಸಿಲಿನ ನಡುವೆ ಕಣ್ಣಾಮುಚ್ಚಾಲೆ ಮುಂದುವರಿಯಲಿದೆ.