Publish Date: Tue, 23 Jul 2024 (10:21 IST)
Updated Date: Tue, 23 Jul 2024 (10:22 IST)
ಬೆಂಗಳೂರು: ಕರ್ನಾಟಕದಲ್ಲಿ ವಿಪರೀತ ಮಳೆಯಿಂದಾಗಿ ಬೆಂಗಳೂರು ಮತ್ತು ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವ ಶಿರಾಡಿ ಘಾಟಿ ಕಳೆದ ನಾಲ್ಕು ದಿನಗಳಿಂದ ಬಂದ್ ಆಗಿ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿತ್ತು.
ಆದರೆ ಈಗ ಕರಾವಳಿ ಸೇರಿದಂತೆ ಎಲ್ಲೆಡೆ ಮಳೆಯ ಅಬ್ಬರ ಕೊಂಚ ಕಡಿಮೆಯಾಗಿದೆ. ಇದರಿಂದಾಗಿ ಶಿರಾಡಿ ಘಾಟಿಯೂ ಓಪನ್ ಆಗಿದೆ. ಮೊನ್ನೆ ಸಂಜೆಯಿಂದಲೇ ಎಲ್ಲಾ ವಾಹನಗಳ ಸಂಚಾರಕ್ಕೂ ಅನುವು ಮಾಡಿಕೊಡಲಾಗುತ್ತಿದೆ. ಇದುವರೆಗೆ ಹಗಲು ಹೊತ್ತು ಮಾತ್ರ ಬಸ್ ಸಂಚಾರವಿತ್ತು.
ಆದರೆ ಮೊನ್ನೆ ರಾತ್ರಿಯಿಂದಲೇ ಸ್ಲೀಪರ್, ಅಂಬಾರಿ ಸೇರಿದಂತೆ ಎಲ್ಲಾ ಬಸ್ ಗಳನ್ನು ರಾತ್ರಿಯೂ ಬಿಡಲಾಗುತ್ತಿದೆ ಎಂದು ಕೆಎಸ್ ಆರ್ ಟಿಸಿ ಮಾಹಿತಿ ನೀಡಿದೆ. ಇದರಿಂದಾಗಿ ಕರಾವಳಿ ಭಾಗಗಳಿಗೆ ತೆರಳುವ ಜನರು ನಿಟ್ಟುಸಿರು ಬಿಡುವಂತಾಗಿದೆ. ಇದೀಗ ಎಂದಿನಂತೆ ಕೆಎಸ್ ಆರ್ ಟಿಸಿ ಬುಕಿಂಗ್ ನಡೆಯುತ್ತಿದೆ.
ಹವಾಮಾನ ಇಲಾಖೆ ವರದಿ ಪ್ರಕಾರ ಇನ್ನೆರಡು ದಿನ ಕರಾವಳಿ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಹಾಗಿದ್ದರೂ ಮೊದಲಿನ ಅಬ್ಬರ ಕೊಂಚ ಕಡಿಮೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ. ಹಾಗಿದ್ದರೂ ಮುಂಜಾಗ್ರತಾ ಕ್ರಮವಾಗಿ ಕರಾವಳಿ ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರಿನಲ್ಲೂ ಮೋಡ ಕವಿದ ವಾತಾವರಣ ಮುಂದುವರಿದಿದೆ.