Publish Date: Fri, 25 Oct 2024 (10:00 IST)
Updated Date: Fri, 25 Oct 2024 (10:05 IST)
ಬೆಂಗಳೂರು: ಕರ್ನಾಟಕದಲ್ಲಿ ಹಿಂಗಾರು ಮಳೆಯ ಅಬ್ಬರ ಇನ್ನೂ ತಗ್ಗಿಲ್ಲ. ಕೆಲವು ಜಿಲ್ಲೆಗಳಲ್ಲಿ ಇಂದೂ ಮಳೆಯಾಗುವ ಸೂಚನೆಯಿದೆ ಎಂದು ಹವಾಮಾನ ವರದಿ ಹೇಳುತ್ತಿದೆ.
ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಈ ಬಾರಿ ಹಿಂಗಾರು ಮಳೆ ಜೋರಾಗಿಯೇ ಸುರಿಯುತ್ತಿದೆ. ಬೆಂಗಳೂರಿಗೆ ಮುಂಗಾರು ಮಳೆ ಅಷ್ಟೊಂದು ಬಿದ್ದಿಲ್ಲ. ಆದರೆ ಹಿಂಗಾರು ಮಳೆಯಿಂದ ನಗರಕ್ಕೆ ಸಾಕಷ್ಟು ಹಾನಿಯಾದ ವರದಿಗಳಾಗಿವೆ. ಹಾಗಿದ್ದರೂ ಕಳೆದ ಎರಡು ದಿನಗಳಿಂದ ವರುಣ ಕೊಂಚ ಬಿಡುವು ನೀಡಿದ್ದಾನೆ.
ಕಳೆದ ಎರಡು ದಿನಗಳಿಂದ ಮಳೆಯ ಅಬ್ಬರ ಕೊಂಚ ಕಡಿಮೆಯಾಗಿದೆ. ಹಾಗಿದ್ದರೂ ಇನ್ನೂ ಮಳೆ ಇಲ್ಲ ಎಂದು ಹೇಳುವ ಪರಿಸ್ಥಿತಿಯಲ್ಲಿಲ್ಲ. ಬೆಂಗಳೂರು, ಹಾಸನ, ತುಮಕೂರು, ಮೈಸೂರು, ಮಂಡ್ಯ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಇನ್ನೂ ಎರಡು ದಿನಗಳ ಕಾಲ ಮಳೆಯ ಮುನ್ಸೂಚನೆಯಿದೆ.
ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು ಅಲ್ಲಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಸೈಕ್ಲೋನ್ ಅಬ್ಬರ ಇನ್ನೂ ಕಡಿಮೆಯಾಗಿಲ್ಲ. ಹೀಗಾಗಿ ಸಂಜೆ ವೇಳೆ ಮಳೆಯಾದರೂ ಅಚ್ಚರಿಯಿಲ್ಲ. ಒರಿಶ್ಶಾ, ಪಶ್ಚಿಮ ಬಂಗಾಲದ ತೀರಗಳಿಗೆ ದಾನಾ ಸೈಕ್ಲೋನ್ ಅಪ್ಪಳಿಸುವ ಸಾಧ್ಯತೆಯಿದ್ದು, ಮತ್ತಷ್ಟು ಮಳೆಯ ನಿರೀಕ್ಷೆಯಿದೆ.