Publish Date: Wed, 22 Jul 2026 (17:47 IST)
Updated Date: Wed, 22 Jul 2026 (17:49 IST)
ಬೆಂಗಳೂರು: ಪೊಲೀಸ್ ಕಸ್ಟಡಿಯಲ್ಲಿ ಇದ್ದಾಗಲೇ ನಮ್ಮ ಶಾಸಕರ ಮೇಲೆ ಹಲ್ಲೆ ಆಗಿದೆ. ಪೊಲೀಸ್ ವ್ಯವಸ್ಥೆ ವಿಫಲವಾಗಿದೆ. ಕಾಂಗ್ರೆಸ್ ಪಕ್ಷದ ನಿರ್ದೇಶನದ ಮೇರೆಗೆ ನಮ್ಮ ಮೇಲೆ ಹಲ್ಲೆ ನಡೆಸಲಾಗಿದೆ. ಇದೆಲ್ಲದಕ್ಕೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ನೇರ ಕಾರಣರು ಎಂದು ವಿಪಕ್ಷ ನಾಯಕ ಆರ್.ಅಶೋಕ್ ಅವರು ಆರೋಪಿಸಿದ್ದಾರೆ.
ನಗರದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಹಲ್ಲೆ ಪೂರ್ವನಿಯೋಜಿತ ಕೃತ್ಯ ಎಂದು ಆಕ್ಷೇಪಿಸಿದರು. ಕಾಂಗ್ರೆಸ್ ಕಚೇರಿಯಲ್ಲಿ ಲಾಂಗು, ಮಚ್ಚು ಇತ್ತು. ಅಲ್ಲಿ ಬಾಂಬ್ಗಳೂ ಇರಬಹುದು ಎಂದು ಆರೋಪಿಸಿದರು. ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದವರು ಕಾಂಗ್ರೆಸ್ಸಿನಿಂದ ಬಂದವರು ಎಂದು ದೂರಿದರು.
ಕಾಂಗ್ರೆಸ್ ಕಚೇರಿಯು ದೇಶವಿರೋಧಿಗಳ ಕಚೇರಿ ಎಂದ ಅವರು, ಹಲ್ಲೆ ಸಂಬಂಧ ಪೊಲೀಸ್ ಕಮೀಷನರ್ ಅವರಿಗೆ ದೂರು ಕೊಡಲಾಗಿದೆ. ನಮ್ಮನ್ನು ಕೊಲೆ ಮಾಡುವ ಪ್ರಯತ್ನ ಮಾಡಿದ್ದಾರೆ. ಪ್ರಕರಣ ಮುಚ್ಚಿಹಾಕದಂತೆ ಎಚ್ಚರಿಸಲಾಗಿದೆ ಎಂದರು. ನಮ್ಮ ಬಿಜೆಪಿ ಕಚೇರಿ ಮುಂದೆ 16 ಸಾರಿ ಪ್ರತಿಭಟನೆ ಮಾಡಿದ್ದಾರೆ. ಕಾನೂನು ನಮಗೆ ಮಾತ್ರ; ಅವರಿಗೆ ಕಾನೂನು ಇಲ್ಲವೇ ಎಂದು ಕೇಳಿದರು.
ಹಲ್ಲೆಕೋರರ ಬಂಧನಕ್ಕೆ ಇವತ್ತು ರಾತ್ರಿ 10 ಗಂಟೆವರೆಗೆ ಸಮಯ ಕೊಟ್ಟಿದ್ದೇವೆ. ಬಂಧನ ನಡೆಯದೇ ಇದ್ದರೆ ಶಿವಕುಮಾರ್ ಅವರ ಗೂಂಡಾ ಸರಕಾರದ ವಿರುದ್ಧ ಹಾಗೂ ಪ್ರಜಾಪ್ರಭುತ್ವದ ಉಳಿವಿಗಾಗಿ ನಾಳೆ ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಶಾಸಕರು, ವಿಧಾನಪರಿಷತ್ ಸದಸ್ಯರು ಪ್ರತಿಭಟನೆ ಮಾಡಲಿದ್ದೇವೆ ಎಂದು ಎಚ್ಚರಿಸಿದರು.
ಮುಂದಿನ ಹೋರಾಟದ ಕುರಿತು ರಾಜ್ಯಾಧ್ಯಕ್ಷರ ಜೊತೆ ಇದರ ಬಗ್ಗೆ ಮಾತನಾಡುವೆ ಎಂದು ಅವರು ತಿಳಿಸಿದರು. ಲಾಂಗು, ಮಚ್ಚು ಹಿಡಿದವರನ್ನು ಗುರುತಿಸುತ್ತೇವೆ; ಅವರು ಕಾಂಗ್ರೆಸ್ ಕಚೇರಿಯಿಂದಲೇ ಬಂದಿದ್ದಾರೆ ಎಂದು ಅವರು ಪ್ರಶ್ನೆಗೆ ಉತ್ತರಿಸಿದರು.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ