Publish Date: Tue, 21 Jul 2026 (13:49 IST)
Updated Date: Tue, 21 Jul 2026 (13:52 IST)
ಶಿವಮೊಗ್ಗ: ಭಾರತೀಯ ಜನತಾ ಪಕ್ಷದ ವತಿಯಿಂದ ಜುಲೈ 25, 26 ರಂದು ಎಸ್ಐಆರ್ ಮಹಾಸಂಪರ್ಕ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಒಂದು ಕೋಟಿ ಮನೆಗಳನ್ನು ತಲುಪುವ ಉದ್ದೇಶ ಇದೆ ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.
ನಗರದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಎಸ್ಐಆರ್ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಮಹಾಸಂಪರ್ಕ ಅಭಿಯಾನ ಆಯೋಜಿಸಲಾಗಿದೆ. ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಮುಖಂಡರ ನೇತೃತ್ವದಲ್ಲಿ ನಡೆಯಲಿದೆ. ಬಿಜೆಪಿಯ ಎಲ್ಲಾ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಹಿಂದಿನ ಚುನಾಯಿತ ಪ್ರತಿನಿಧಿಗಳು, ಕಾರ್ಯಕರ್ತರು ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಮನೆಮನೆಗೆ ಹೋಗಿ ಎನ್ಯೂಮರೇಷನ್ ಫಾರಂ ಬಗಗೆ ಜಾಗೃತಿ ಮೂಡಿಸಲಾಗುವುದು. ಮತದಾರರಲ್ಲಿನ ತೊಂದರೆ, ಗೊಂದಲಗಳನ್ನು ಪರಿಹರಿಸಲಾಗುವುದು. ಎಸ್ಐಆರ್ ಯಶಸ್ವಿಯಾಗಿ ನಡೆಯಲು ಬೆಂಬಲ ನೀಡಲಾಗುವುದು. ಪ್ರತಿ ಕಾರ್ಯಕರ್ತರು ಕನಿಷ್ಠ 20 ಮನೆಗಳನ್ನು ತಲುಪಲು ನಿಗದಿಪಡಿಸಲಾಗಿದೆ ಎಂದು ವಿವರ ನೀಡಿದರು.
ರಾಜ್ಯದಲ್ಲಿ ಮಳೆ ಕೊರತೆಯಿಂದ ಭೀಕರ ಬರಗಾಲ ಬಂದಿದೆ. ಸಿಎಂ ಮತ್ತು ರಾಜ್ಯ ಸರ್ಕಾರ ಬೆಂಗಳೂರಿನಲ್ಲೇ ಉಳಿದು ವಿಡಿಯೊ ಕಾನ್ಫರೆನ್ಸ್ ಮೂಲಕ ಸಭೆ ಮಾಡಿದೆ. ಆದರೆ ಯಾವುದೇ ಸಚಿವರು ರಾಜ್ಯ ಪ್ರವಾಸ ಮಾಡುತ್ತಿಲ್ಲ. ರೈತರ ಸಮಸ್ಯೆ ಆಲಿಸುತ್ತಿಲ್ಲ. ಆದರೆ ಹಿರಿಯ ನಾಯಕರ ತಂಡದೊಂದಿಗೆ ಸಿಎಂ ದೆಹಲಿಗೆ ಹೋಗಿದ್ದಾರೆ. ಪ್ರಧಾನಿಗೆ ಪತ್ರ ಬರೆದು ರಾಜ್ಯ ಸರ್ಕಾರದ ಜವಾಬ್ದಾರಿ ಇಲ್ಲ ಎಂದು ವರ್ತನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ರಿಯಲ್ ಎಸ್ಟೇಟ್ ಬಗ್ಗೆ ಡಿ.ಕೆ.ಶಿವಕುಮಾರ್ ಅವರು ತಲೆಕೊಂಡಿರುವಷ್ಟೇ ರೈತರ ಬಗ್ಗೆಯೂ ಕಾಳಜಿ ವಹಿಸಲಿ. ಬಿತ್ತನೆ ಮಾಡಿದ ರೈತರೂ ಬೀದಿಗೆ ಬಂದಿದ್ದಾರೆ. ಬರವನ್ನು ಅರಿತುಕೊಂಡು ರಾಜ್ಯ ಸರ್ಕಾರ ಸ್ಪಂದಿಸಬೇಕು. ಸಚಿವರು ಜಿಲ್ಲಾ ಪ್ರವಾಸ ಮಾಡಬೇಕು ಎಂದು ಆಗ್ರಹಿಸಿದರು. ಈ ಹಿಂದೆ ಯಡಿಯೂರಪ್ಪ ಅವರು ಸಿಎಂ ಇದ್ದಾಗ ಸಚಿವರು ಇರಲಿಲ್ಲ. ಆಗ ಅವರು ಏಕಾಂಗಿಯಾಗಿ ರಾಜ್ಯ ಪ್ರವಾಸ ಮಾಡಿ ರೈತರ ಸಂಕಷ್ಟ ಆಲಿಸಿದ್ದರು. ನೆರೆ ಪೀಡಿತರಿಗೆ ಪರಿಹಾರ ನೀಡಿದ್ದರು ಎಂದರು.
ದೆಹಲಿಯಲ್ಲಿ ಕೇಂದ್ರ ಸಚಿವ ಧಮೇರ್ಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆದಿದೆ. ಆದರೆ ಪ್ರತಿಭಟನೆ ನೆಪದಲ್ಲಿ ಅರಾಜಕತೆ ಸೃಷ್ಟಿಸುವ ಯತ್ನ ಆಗಿದೆ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಗೆ ವಿರೋಧವಿಲ್ಲ. ಮಾಧ್ಯಮ ಪ್ರತಿನಿಧಿಗಳ ಮೇಲೂ ಹಲ್ಲೆ ನಡೆದಿದೆ. ದೇಶವಿರೋಧಿ ಹೇಳಿಕೆ ನೀಡಿದ್ದಾರೆ. ಯುವಕರನ್ನು ಪ್ರತಿಭಟನೆಗೆ ಮುಂದೆ ಬಿಟ್ಟು ವಿರೋಧಪಕ್ಷಗಳು ಇದರ ಹಿಂದೆ ಷಡ್ಯಂತ್ರ ಮಾಡಿವೆ ಎಂದು ಆರೋಪಿಸಿದರು.
ಈ ಸಂಬಂಧ ಸಿದ್ದರಾಮಯ್ಯ ಹೇಳಿಕೆ ನೋಡಿದ್ದೇನೆ. ಮೋದಿ ಅವರು ದುರ್ಬಲ, ದುಷ್ಟ ರಕ್ಷಕ ಪ್ರಧಾನಿ ಎಂದು ಹೇಳಿದ್ದಾರೆ. ತಾವು ಸಿಎಂ ಆಗಿದ್ದಾಗ ಹುಬ್ಬಳ್ಳಿಯಲ್ಲಿ ಸರ್ಕಾರಿ ಹುದ್ದೆಗಳ ನೇಮಕಾತಿಗೆ ಆಗ್ರಹಿಸಿ ಲಕ್ಷಾಂತರ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಆಗ ಸಿದ್ದರಾಮಯ್ಯ ಅವರ ಕಾಳಜಿ ಎಲ್ಲಿ ಹೋಗಿತ್ತು. ಅಲ್ಲದೆ ಎಷ್ಟು ಹುದ್ದೆ ಭರ್ತಿ ಮಾಡಿ ಅವರ ಜೀವನ ಕಟ್ಟಿಕೊಟ್ಟಿದ್ದೀರಿ ಎಂದು ಪ್ರಶ್ನಿಸಿದರು.
ಚಿನ್ನಸ್ವಾಮಿ ಕಾಳ್ತುಳಿತದ ಬಗ್ಗೆ ತನಿಖೆಗೆ ತನಿಖಾ ತಂಡ ಘೋಷಣೆ ಮಾಡಿ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದರು. ಸಿಎಂ ಹಾಗೂ ಡಿಸಿಎಂ ತಪ್ಪಿಸಿಕೊಳ್ಳಲು, ಪ್ರಚಾರಕ್ಕಾಗಿ ಹೀಗೆ ಮಾಡಿದ್ದೀರಿ. ಇದನ್ನೆಲ್ಲ ರಾಜ್ಯದ ಜನ ಮರೆತಿಲ್ಲ ಎಂದು ತಿಳಿಸಿದರು.
ನೀಟ್ ವಿಚಾರದಲ್ಲಿ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡು ಮರು ಪರೀಕ್ಷೆ ಮಾಡಿದೆ. ಇಂತಹ ವಿಚಾರಗಳನ್ನು ಇಟ್ಟುಕೊಂಡು ಯುವಕರಲ್ಲಿ ವಿಷಬೀಜ ಬಿತ್ತಲು ಸಿದ್ದರಾಮಯ್ಯ ಅವರು ಹೋಗಬಾರದು. ಇದರಿಂದ ಯಾವ ಪ್ರಯೋಜವಿಲ್ಲ. ತಾವು ಸಿಎಂ ಆಗಿದ್ದಾಗ ಏನು ಕೊಡುಗೆ ನೀಡಿದ್ದೀರಿ ಎಂಬುದನ್ನು ತಿಳಿಸಿ ಎಂದು ಒತ್ತಾಯಿಸಿದರು.
ಎರಡನೇ ವಿಮಾನ ನಿಲ್ದಾಣವನ್ನು ಕನಕಪುರದ ಸಮೀಪವೇ ಮಾಡಲು ಸಿಎಂ ಡಿ.ಕೆ.ಶಿವಕುಮಾರ್ ಅವರು ಮುಂದಾಗಿದ್ದಾರೆ. ಇದಕ್ಕೆ ವಿರೋಧಿಸಿ ಪತ್ರ ಬರೆದಿದ್ದೇನೆ. ಡಿಕೆಶಿ ಅವರು ಕನಕಪುರದ ಸಿಎಂ ಅಲ್ಲ ರಾಜ್ಯದ ಸಿಎಂ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಯೋಜನೆಯನ್ನು ತೀರ್ಮಾನ ಮಾಡುವಾಗ ರಿಯಲ್ ಎಸ್ಟೇಟ್ ಹಿತಾಸಕ್ತಿ ಬದಲು ರಾಜ್ಯದ ಹಿತಾಸಕ್ತಿ ಇರಲಿ ಎಂದು ಆಗ್ರಹಿಸಿದ್ದೇನೆ. ಎರಡನೇ ವಿಮಾನ ನಿಲ್ದಾಣ ತುಮಕೂರು ಅಕ್ಕ ಪಕ್ಕ ಬಂದರೆ ಏಳೆಂಟು ಜಲ್ಲೆಗಳಿಗೆ ಲಾಭ ಆಗಲಿದೆ. ಬೆಂಗಳೂರು ಮಹಾನಗರದ ಮೇಲಿನ ಒತ್ತಡ ತಪ್ಪಲಿದೆ ಎಂದು ಹೇಳಿದರು.
ಗೃಹಲಕ್ಷ್ಮಿ ಯೋಜನೆಯ ಮರುಪರಿಶೀಲನೆಯ ಗೊಂದಲವನ್ನು ರಾಜ್ಯ ಸರ್ಕಾರವೇ ಸೃಷ್ಟಿಸಿದೆ. ಹೊಸದಾಗಿ ಅರ್ಜಿ ಸಲ್ಲಿಸಬೇಕು ಎಂಬ ನೆವದಲ್ಲಿ ಒಂದಷ್ಟು ಷರತ್ತು ಹಾಕಿದರೆ ಐದಾರು ತಿಂಗಳು ಮುಂದೂಡಿದರೆ ರಾಜ್ಯ ಸರ್ಕಾರದ ಮೇಲೆ ಆರ್ಥಿಕ ಸಂಕಷ್ಟ ತಪ್ಪಲಿದೆ ಎಂದು ರಾಜ್ಯ ಸರ್ಕಾರ ಬಯಸಿದೆ. ಇದರ ಬಗ್ಗೆ ಮುಂದಿನ ಅಧಿವೇಶನದಲ್ಲಿ ಚರ್ಚಿಸಲಾಗುವುದು ಎಂದರು.
ಧಮೇರ್ಂದ್ರ ಪ್ರಧಾನ್ ಅವರು ನೀಟ್ ಬಗ್ಗೆ ಮಾತನಾಡಿದ್ದಾರೆ. ಮರು ಪರೀಕ್ಷೆ ಸಹ ಆಗಿದೆ. ಜೆ ಪಿ ನಡ್ಡಾ ಅವರು ಪ್ರತಿಭಟನಾ ನಿರತ ವಿದ್ಯಾರ್ಥಿ ಮುಖಂಡರ ಜೊತೆ ಚರ್ಚೆ ಮಾಡಿದ್ದಾರೆ. ಎಲ್ಲವೂ ಸರಿ ಹೋಗಲಿದೆ. ಪರಿಸ್ಥಿತಿಯನ್ನು ದುರುಪಯೋಗ ಪಡಿಸಿಕೊಳ್ಳುವ ಪ್ರಯತ್ನವನ್ನು ವಿರೋಧ ಪಕ್ಷಗಳು ಮಾಡುತ್ತಿವೆ. ತೊಂದರೆ ಸರಿಪಡಿಸಲು ಕೇಂದ್ರ ಸರ್ಕಾರ ಎಲ್ಲಾ ಕ್ರಮ ಕೈಗೊಂಡಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ