Publish Date: Mon, 03 Feb 2025 (14:04 IST)
Updated Date: Mon, 03 Feb 2025 (14:06 IST)
ಮಂಡ್ಯ: ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ 8 ವರ್ಷದ ಬಾಲಕಿಯನ್ನು ಬೆದರಿಸಿ ಗ್ಯಾಂಗ್ ರೇಪ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಎಲ್ಲಾ ಓಲೈಕೆ ರಾಜಕೀಯದ ಪ್ರಭಾವ ಎಂದಿದೆ.
ಜನವರಿ 31 ರಂದು ಘಟನೆ ನಡೆದಿದ್ದು ಇದೀಗ ಪ್ರಕರಣ ಬೆಳಕಿಗೆ ಬಂದಿದೆ. ನಿನ್ನೆ ಬಾಲಕಿ ತೋವ್ರ ಹೊಟ್ಟೆ ನೋವು ಮತ್ತು ರಕ್ತಸ್ರಾವಕ್ಕೊಳಗಾಗಿದ್ದರಿಂದ ಪೋಷಕರು ಆಸ್ಪತ್ರೆಗೆ ಕರೆದೊಯ್ದಿದ್ದರು. ಈ ವೇಳೆ ತಾಯಿಯ ಬಳಿಕ ಮಗು ನಡೆದ ಘಟನೆ ಬಾಯ್ಬಿಟ್ಟಿದ್ದಾಳೆ.
ತಕ್ಷಣವೇ ಬಾಲಕಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದಾಳೆ. ಮೂವರು ಶಂಕಿತರ ವಿರುದ್ಧ ಪೊಲೀಸರು ಪೋಸ್ಕೋ ಖಾಯಿದೆಯಡಿ ದೂರು ದಾಖಲಿಸಿದ್ದಾರೆ. ಮಗುವನ್ನು ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಮಾಲೋಚಕರು ಮಗುವಿನ ಜೊತೆ ಸಮಾಲೋಚನೆ ನಡೆಸಲಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ, ಕಾಂಗ್ರೆಸ್ ಬಂದ ಮೇಲೆ ಕರ್ನಾಟಕದಲ್ಲಿ ರೇಪ್ ಹೆಚ್ಚಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೇ ರಾಜ್ಯಾದ್ಯಂತ ಕಾನೂನು ಸುವ್ಯವಸ್ಥೆ ಹಳ್ಳ ಹಿಡಿದಿದ್ದು ಸಮಾಜಘಾತುಕ ಶಕ್ತಿಗಳು ದಿನನಿತ್ಯ ಪೈಶಾಚಿಕ ಕೃತ್ಯ ನಡೆಸುತ್ತಿದ್ದಾರೆ. ಮಂಡ್ಯದಲ್ಲಿ 8 ವರ್ಷದ ಬಾಲಕಿ ಮೇಲೆ ನಡೆದ ಗ್ಯಾಂಗ್ ರೇಪ್ ಅಮಾನವೀಯ. ಸಿದ್ದರಾಮಯ್ಯ, ಪರಮೇಶ್ವರ್ ಆಡಳಿತದಲ್ಲಿ ಮಹಿಳೆಯರಿಗೆ ರಕ್ಷಣೆ ಗಗನಕುಸುಮ. ನಿಮ್ಮ ದಟ್ಟ ದರಿದ್ರ ಓಲೈಕೆ ರಾಜಕಾರಣದಿಂದ ಕನ್ನಡಿಗರು ಇನ್ನೆಷ್ಟು ದಿನ ಅನುಭವಿಸಬೇಕು ಎಂದು ಕಿಡಿ ಕಾರಿದೆ.