Publish Date: Wed, 12 Mar 2025 (08:47 IST)
Updated Date: Wed, 12 Mar 2025 (08:52 IST)
ಬೆಂಗಳೂರು: ಕರ್ನಾಟಕದಲ್ಲಿ ಸತತ ಬಿಸಿಲಿನಿಂದ ತತ್ತರಿಸಿದ್ದ ಜನಕ್ಕೆ ಈಗ ಸಣ್ಣ ಮಟ್ಟಿನ ಮಳೆ ಸಮಾಧಾನ ತರಲಿದೆ. ಇಂದು ರಾಜ್ಯದ ಯಾವೆಲ್ಲಾ ಜಿಲ್ಲೆಗಳಿಗೆ ಮಳೆಯ ಸೂಚನೆಯಿದೆ ನೋಡಿ.
ಕರ್ನಾಟಕದಲ್ಲಿ ಈ ವಾರ ಕೆಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ವರದಿಗಳು ತಿಳಿಸಿದ್ದವು. ಅದರಂತೆ ನಿನ್ನೆ ಬೆಂಗಳೂರಿನಲ್ಲಿ ಅಪರಾಹ್ನದಿಂದ ಮೋಡ ಕವಿದ ವಾತಾವರಣ ಮತ್ತು ಕೆಲವೆಡೆ ಸಣ್ಣ ಹನಿ ಮಳೆಯಾಗಿದೆ.
ಆದರೆ ಇಂದು ಬೆಂಗಳೂರಿನಲ್ಲಿ ಮಳೆಯ ಸೂಚನೆಯಿಲ್ಲ. ಆದರೆ ರಾಜ್ಯದ ಬೇರೆ ಕೆಲವು ಜಿಲ್ಲೆಗಳಿಗೆ ಇಂದು ಮಳೆಯ ಸೂಚನೆಯಿದೆ. ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳಿಗೆ ಇಂದು ಮಳೆಯ ಸೂಚನೆಯಿದೆ.
ಕರಾವಳಿ ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಿಂದ ಕೆಂಡದಂತೆ ಸುಡುವ ವಾತಾವರಣವಿತ್ತು. ಆದರೆ ಈಗ ಮಳೆಯ ಮುನ್ಸೂಚನೆ ಜನರಿಗೆ ಕೊಂಚ ನೆಮ್ಮದಿ ನೀಡಬಹುದು. ಆದರೆ ಕೃಷಿಕರಿಗೆ ಈ ಮಳೆಯ ಮುನ್ಸೂಚನೆ ಕೊಂಚ ಆತಂಕಕ್ಕೆ ಕಾರಣವಾಗಿದೆ. ಹವಾಮಾನ ವರದಿ ಪ್ರಕಾರ ರಾಜ್ಯದ ಉಳಿದ ಕಡೆ ಇಂದು ತಾಪಮಾನ ಎಂದಿನಂತೆ ಮುಂದುವರಿಯಲಿದೆ.