Publish Date: Fri, 29 Mar 2024 (10:10 IST)
Updated Date: Fri, 29 Mar 2024 (10:19 IST)
ಬೆಂಗಳೂರು: ಬೆಂಗಳೂರಿನಲ್ಲಿ ನೀರಿನ ಸಮಸ್ಯೆಯಿದೆ, ನಮ್ಮ ರಾಜ್ಯಕ್ಕೆ ಬನ್ನಿ ಎಂದು ಐಟಿ ಕಂಪನಿಗಳಿಗೆ ಕೇರಳ ಆಹ್ವಾನ ಕೊಟ್ಟ ಬೆನ್ನಲ್ಲೇ ಜಲಮಂಡಳಿ ಎಚ್ಚೆತ್ತುಕೊಂಡಿದೆ.
ಬೆಂಗಳೂರಿನಲ್ಲಿ ನೀರನ ಕೊರತೆಯಿಂದಾಗಿ ಐಟಿ ಕಂಪನಿಗಳಿಗೆ ನೆರೆ ರಾಜ್ಯಗಳಿಂದ ಆಹ್ವಾನ ಬರುತ್ತಿದೆ. ಕೆಲವು ಕಂಪನಿಗಳು ಈಗಾಗಲೇ ವರ್ಕ್ ಫ್ರಂ ಹೋಂ ಆಯ್ಕೆ ನೀಡಿವೆ. ಇದರಿಂದ ಹಲವರು ತಮ್ಮ ಊರಿಗೆ ತೆರಳುತ್ತಾರೆ. ಇದರಿಂದಾಗಿ ಬೆಂಗಳೂರಿನ ನೀರಿನ ಸಮಸ್ಯೆ ಕಡಿಮೆಯಾಗಬಹುದು ಎಂಬ ಲೆಕ್ಕಾಚಾರ.
ಆದರೆ ಐಟಿ ಕಂಪನಿಗಳಿಗೆ ನೆರೆ ರಾಜ್ಯಗಳು ಗಾಳ ಹಾಕುತ್ತಿರುವ ವದಂತಿ ಬೆನ್ನಲ್ಲೇ ಎಚ್ಚೆತ್ತುಕೊಂಡ ಜಲಮಂಡಳಿ ಐಟಿ ಕಂಪನಿಗಳಿಗೆ ಅಗತ್ಯವಾದಷ್ಟು ನೀರು ಪೂರೈಸಲು ಸಿದ್ಧ ಎಂದು ಘೋಷಿಸಿದೆ. ಐಟಿ ಕಂಪನಿಗಳಿಗೆ ನೀರು ಕೊರತೆಯಾಗದಂತೆ ಆದಷ್ಟು ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದೆ.
ಐಟಿ ಕಂಪನಿಗಳು ನೀರು ಪೋಲಾಗದಂತೆ ಎಚ್ಚರಿಕೆಯಿಂದ ಬಳಸಬೇಕು. ತಮ್ಮ ನೌಕರರಿಗೂ ನೀರು ಉಳಿಕೆ ಬಗ್ಗೆ ಜಾಗೃತಿ ಮೂಡಿಸಬೇಕು. ಕುಡಿಯುವುದಕ್ಕಲದೆ ಅನ್ಯ ಉದ್ದೇಶಗಳಿಗೆ ಐಟಿ ಕಂಪನಿಗಳಿಗೆ ಸಂಸ್ಕರಿಸಿದ ನೀರು ಪೂರೈಸಲು ಸಿದ್ಧ ಎಂದು ಜಲಮಂಡಳಿ ಭರವಸೆ ನೀಡಿದೆ.