Publish Date: Fri, 02 Jun 2023 (21:11 IST)
Updated Date: Fri, 02 Jun 2023 (20:23 IST)
ನಗರದಲ್ಲಿಂದು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ಈ ಸಂಬಂಧ ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಸಮಸ್ಯೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ವಲಯ ಆಯುಕ್ತರಾದ ಶ್ರೀ ಜಯರಾಮ್ ರಾಯಪುರ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಬರುವ ಕಂಟ್ರೋಲ್ ರೂಂಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವ ವೇಳೆ, ಕಂಟ್ರೋಲ್ ರೂಂಗಳಲ್ಲಿ ಬರುವಂತಹ ದೂರುಗಳನ್ನು ಸ್ವೀಕರಿಸಿದ ಕೂಡಲೆ ದೂರುಗಳಿಗೆ ಸಂಬಂಧಿಸಿದ ಅಧಿಕಾರಿ/ಸಿಬ್ಬಂದಿಗಳ ಗಮನಕ್ಕೆ ತಂದು ತ್ವರಿತಗತಿಯಲ್ಲಿ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಸೂಚನೆ ನೀಡಿದರು.
ಮಳೆ ಬೀಳುವ ಸಮಯದಲ್ಲಿ ಗಾಳಿಯಿಂದ ಬೀಳುವಂತಹ ಮರಗಳು/ರೆಂಬೆ-ಕೊಂಬೆಗಳನ್ನು ತೆರವುಗೊಳಿಸಲು, ರಸ್ತೆಗಲ್ಲಿ ನಿಂತಿರುವ ನೀರು ಚರಂಡಿಗಳಲ್ಲಿ ಸರಾಗವಾಗಿ ಹರಿದು ಹೋಗುವಂತೆ ಮಾಡಲು, ಜಲಾವೃತವಾಗಿರುವಂತಹ ಸ್ಥಳಗಳಲ್ಲಿ ನೀರನ್ನು ತೆರವುಗೊಳಿಸುವ ಸಲುವಾಗಿ ಅವಶ್ಯಕತೆಯಿರುವ ಸಲಕರಣೆಗಳು, ನೀರು ಹೊರ ಹಾಕುವ ಪಂಪ್ ಹಾಗೂ ಸಿಬ್ಬಂದಿಗಳ ವ್ಯವಸ್ಥೆ ಮಾಡಿಕೊಂಡು ಎಲ್ಲಾ ರೀತಿಯಲ್ಲಿ ಸಿದ್ಧ್ದವಾಗಿರಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ವೇಳೆ ಮುಖ್ಯ ಅಭಿಯಂತರರಾದ ರಾಜೇಶ್, ಕಾರ್ಯಪಾಲಕ ಅಭಿಯಂತರರು ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.