Publish Date: Sun, 09 Sep 2018 (18:03 IST)
Updated Date: Sun, 09 Sep 2018 (18:12 IST)
ನಿರಂತರ ಇಂಧನ ದರ ಏರಿಕೆ ವಿರೋಧಿಸಿ ಕರೆ ನೀಡಿರುವ ದೇಶವ್ಯಾಪಿ ಬಂದ್ ಗೆ ಹಾಸನ ಜಿಲ್ಲೆಯಲ್ಲೂ ವಿವಿಧ ರಾಜಕೀಯ ಪಕ್ಷಗಳು ಸೇರಿದಂತೆ ಹಲವು ಸಂಘಟನೆಗಳು ಬೆಂಬಲ ಸೂಚಿಸಿವೆ. ಜೆಡಿಎಸ್, ಕಾಂಗ್ರೆಸ್ ಜೊತೆಗೆ ಲಾರಿ ಮಾಲೀಕರ ಸಂಘ, ಆಟೋ ಸಂಘ ಸೇರಿ ಹಲವು ಸಂಘಟನೆಗಳು ಬಂದ್ ಗೆ ಸಹಕಾರ ನೀಡುವುದಾಗಿ ಹೇಳಿವೆ. ಈಗಾಗಲೇ ಸಾರಿಗೆ ನೌಕರರು ಸಂಪೂರ್ಣ ಬೆಂಬಲ ನೀಡಿರುವುದರಿಂದ ಶಾಲಾ, ಕಾಲೇಜ್ ಬಂದ್ ಆಗುವ ಸಾಧ್ಯತೆ ಹೆಚ್ಚಿದ್ದು, ಸೆಪ್ಟಂಬರ್ 10 ರ ಬಂದ್ ಯಶಸ್ವಿಯಾಗುವ ಸಾಧ್ಯತೆ ಇದೆ.
ಭಾರತ ಬಂದ್ ಕುರಿತು ಹಾಸನದಲ್ಲಿ ಪ್ರತಿಕ್ರಿಯೆ ನೀಡಿದ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು, ಬಂದ್ ಗೆ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.
ರಾಜ್ಯದ ಎಲ್ಲೆಲ್ಲಿ ನಮ್ಮ ಪಕ್ಷಕ್ಕೆ ಶಕ್ತಿ ಇದೆಯೋ ಅಲ್ಲೆಲ್ಲಾ ಸಹಕಾರ ನೀಡುತ್ತೇವೆ. ನಾನು, ಕುಮಾರಸ್ವಾಮಿ ನಾಳೆ ದೆಹಲಿಗೆ ಹೋಗುತ್ತಿರುವುದರಿಂದ ನಮ್ಮ ಪಕ್ಷದ ಕಾರ್ಯಕರ್ತರು ಬಂದ್ ನಲ್ಲಿ ಭಾಗಿಯಾಗಲಿದ್ದಾರೆ ಎಂದರು. ದಿನದಿಂದ ದಿನಕ್ಕೆ ತೈಲಬೆಲೆ ಗಗನಕ್ಕೆ ಏರುತ್ತಿರುವುದರಿಂದ ಶ್ರೀಸಾಮಾನ್ಯನ ಬದುಕು ಸಂಕಷ್ಟಕ್ಕೆ ಸಿಲುಕಿದೆ. ರೈತರು, ಜನಸಾಮಾನ್ಯರ ಜೀವನ ಕಷ್ಟವಾಗಿದೆ. ಇಂಧನ ದರ ಏರಿಕೆಯಿಂದ ಸರಕು ಸಾಗಣೆ ದರ ಹೆಚ್ಚಾಗಿ ಗ್ರಾಹಕರಿಗೆ ಹೊರೆಯಾಗಿದೆ. ಈ ಎಲ್ಲಾ ಕಾರಣದಿಂದ ಭಾರತ್ ಬಂದ್ ಗೆ ಸಹಕಾರ ನೀಡಲು ತೀರ್ಮಾನ ಮಾಡಲಾಗಿದೆ ಎಂದಿದ್ದಾರೆ.