Publish Date: Fri, 01 Sep 2023 (09:45 IST)
Updated Date: Fri, 01 Sep 2023 (09:46 IST)
ಬೆಂಗಳೂರು : ಯಡಿಯೂರಪ್ಪ ಅವರನ್ನ ಕಡೆಗಣಿಸಿದ್ದೇ ಬಿಜೆಪಿಗೆ ಶಾಪವಾಗಿದೆ ಎಂದು ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ಸ್ವಪಕ್ಷೀಯರ ವಿರುದ್ಧವೇ ಅಸಮಾಧಾನ ಹೊರಹಾಕಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ನಡೆಯುತ್ತಿರುವ ಸಭೆಗಳಿಗೆ ಗೈರಾಗುವ ವಿಚಾರಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ನನಗೆ ನೋಟಿಸ್ ಕೊಟ್ಟಿದ್ದಾರೆ, ಅದಕ್ಕೆ ನಾನು ಹೋಗಿಲ್ಲ. ಆ ನೋಟಿಸ್ ವಾಪಸ್ ಪಡೆಯಬೇಕು ಅದಕ್ಕೆ ಸಭೆಗೆ ಹಾಜರಾಗ್ತಿಲ್ಲ.
ನಾನು ಏನು ಹೇಳಬೇಕೊ ಅದನ್ನ ಹೇಳಿದ್ದೀನಿ. ಇದರಿಂದ ನನಗೆ ವೈಯಕ್ತಿಕವಾಗಿ ಯಾವುದೇ ಲಾಭ ಇಲ್ಲಾ ನಷ್ಟನೂ ಇಲ್ಲ. ಒಬ್ಬ ಸಾಮಾನ್ಯ ಕಾರ್ಯಕರ್ತರ ಅಪೇಕ್ಷೆಯಂತೆ ಇರುವುದನ್ನ ನೇರವಾಗಿ ಹೇಳಿದ್ದೀನಿ ಎಂದು ಹೇಳಿದ್ದಾರೆ.
ಯಡಿಯೂರಪ್ಪ ಅವರಂತಹ ನಾಯಕರನ್ನ ಕಡೆಗಣಿಸಿದ್ದಾರೆ, ಇದು ಬಿಜೆಪಿಗೆ ಶಾಪವಾಗಿದೆ. ವರ್ಚಸ್ಸು ಇರುವವರನ್ನ ಬೆಳೆಯೋಕೆ ಬಿಡ್ತಿಲ್ಲ. ವಿಜಯೇಂದ್ರ ಅಂತಹವರನ್ನ ಮೂಲೆಗುಂಪು ಮಾಡ್ತಿದ್ದಾರೆ.
ನಾನು ನೇರವಾಗಿಯೇ ಮಾತನಾಡಿದ್ದೇನೆ. ಅದಕ್ಕೆ ಶಿಸ್ತು ಕ್ರಮ ತೆಗೆದುಕೊಂಡಿದ್ದಾರೆ. ನಾನು ಪಕ್ಷ, ಮೋದಿ, ನಡ್ಡಾ, ಅಮಿತ್ ಶಾ ವಿರುದ್ಧ ಮಾತನಾಡಿಲ್ಲ. ನಾನು ಮಾತಾಡಿರೋದು ಕೆಲ ವ್ಯಕ್ತಿಗಳ ದೌರ್ಬಲ್ಯವನ್ನ ಅಷ್ಟೇ. ಅದನ್ನ ನೇರವಾಗಿ ಖಂಡಿಸಿದ್ದೇನೆ ಎಂದು ಗುಡುಗಿದ್ದಾರೆ.