ಬೆಂಗಳೂರು: ಬಿಜೆಪಿಯವರು ಆರ್ಎಸ್ಎಸ್ನ ಗುಲಾಮವರು ಎನ್ನುವ ಮೂಲಕ ಮತ್ತೇ ಪ್ರಿಯಾಂಕ್ ಖರ್ಗೆ ತಮ್ಮ ವಾಗ್ದಾಳಿಯನ್ನು ಮುಂದುವರೆಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಕಳೆದ ಒಂದು ತಿಂಗಳಿನಿಂದ ಪಥಸಂಚಲನ ವಿಚಾರವಾಗಿ ಜಟಾಪಟಿಗಳು ನಡೆಯುತ್ತಿದೆ. ನಿನ್ನೆ ಅದರ ಮುಖ್ಯಸ್ಥರು ಮಾತನಾಡಿದ್ದಾರೆ. ಬಿಜೆಪಿಯವರಿಗೆ ಆರ್ಎಸ್ಎಸ್ನ ಬಗ್ಗೆ ಮಾತನಾಡದಿದ್ದರೆ ಟಿಕೆಟ್ ಸಿಗಲ್ಲ ಎಂದರು.
ಆರ್ಎಸ್ಎಸ್ ಅನುಮತಿ ಸಿಗದ ಕಾರಣ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ನೇಮಕ ಇನ್ನೂ ಆಗಿಲ್ಲ ಎಂದು ಲೇವಡಿ ಮಾಡಿದರು.
ಆರ್ಎಸ್ಎಸ್ ಅನ್ನು ಸಮಾಜ ಒಪ್ಪಿಲ್ಲ, ದೇಶ ಒಪ್ಪಿಲ್ಲ, ಆದರೆ ಎಲ್ಲರೂ ಒಪ್ಪಿದ್ದಾರೆ ಎನ್ನುವ ಭಾವನೆ ಸರಿಯಲ್ಲ ಎಂದರು.
ದೊಡ್ಡ ಸಂಘಟನೆ ಅನ್ನುವ ಆರ್ಎಸ್ಎಸ್ ಇನ್ನೂ ಯಾಕೆ ನೋಂದಣಿಯಾಗಿಲ್ಲ ಎಂದರು.
ಇವರಿಗೊಂದು ನ್ಯಾಯ ನಮಗೊಂದು ನ್ಯಾಯನಾ? ಪಥಸಂಚಲನ ಏನಕ್ಕೆ ಮಾಡಬೇಕು? ಅದರ ಅಗತ್ಯ ಏನು? ಪಥಸಂಚಲನ ಮಾಡಬೇಕಾದರೆ ಅನುಮತಿ ತಗೋಬೇಕಲ್ಲ? ನೋಂದಣಿ ಆಗದೇ ಹೇಗೆ ಅನುಮತಿ ಪಡೀತಾರೆ ಎಂದು ಪ್ರಶ್ನೆ ಮಾಡಿದರು.
ನಿಮ್ಮ ಒಡೆತನದ ಖಾಸಗಿ ಜಾಗಗಳಲ್ಲಿ ಪಥಸಂಚಲನ ಮಾಡಿಕೊಳ್ಳಿ. ದೇಶ ಸಂಸ್ಕೃತಿ, ಐಕ್ಯತೆಗೆ ದುಡೀತಿದ್ರೆ ಇದೆಲ್ಲ ಅಗತ್ಯ ಏನು? ದೊಣ್ಣೆ ಹಿಡಿದುಕೊಂಡೇ ಪಥಸಂಚಲನ ಮಾಡಬೇಕು ಅನ್ನೋದೇನು? ಆರ್ಎಸ್ಎಸ್ನ ಪೂರ್ಣಾವಧಿ ಪ್ರಚಾರಕರಿಗೆ ವೇತನ ಅಥವಾ ಗೌರವಧನ ಕೊಡ್ತಿದ್ದಾರಲ್ಲ, ಹೇಗೆ, ಎಲ್ಲಿಂದ ಕೊಡ್ತಿದ್ದಾರೆ ಎಂದು ಪ್ರಶ್ನೆ ಹಾಕಿದರು.
ನಿತ್ಯದ ಖರ್ಚುಗಳನ್ನು ಆರ್ಎಸ್ಎಸ್ ಹೇಗೆ ನಿರ್ವಹಿಸುತ್ತದೆ. ಇದನ್ನೆಲ್ಲ ನಾವು ಕೇಳಬಾರದಾ. ನೋಂದಾಯಿತ ಸಂಸ್ಥೆ, ಸಂಘಟನೆಗಳು ಆರಾರು ತಿಂಗಳಿಗೆ ಲೆಕ್ಕದ ವರದಿ ಕೊಡಬೇಕು. ಇವರು ಕೊಡ್ತಾರಾ ಎಂದು ಪ್ರಶ್ನೆ ಮಾಡಿದರು.