Publish Date: Sat, 04 Mar 2023 (10:54 IST)
Updated Date: Sat, 04 Mar 2023 (10:56 IST)
ಹಾಸನ : ಕುಮಾರಣ್ಣ ನನ್ನ ಹಿತೈಷಿ, ಯಾವಾಗಲೂ ನನ್ನ ಒಳಿತನ್ನೇ ಬಯಸುವಂತಹವರು. ಅವರು ಏನು ಹೇಳಿದರೂ ಆಶೀರ್ವಾದ ಅನ್ಕೊತೀನಿ ಎಂದು ಬಿಜೆಪಿ ಶಾಸಕ ಪ್ರೀತಂ ಗೌಡ ಹೇಳಿದ್ದಾರೆ.
ಅವನ್ಯಾವನೋ ಶಾಸಕ 50 ಸಾವಿರ ಲೀಡ್ನಿಂದ ಗೆಲ್ತೀನಿ ಅಂತ ಚಾಲೆಂಜ್ ಹಾಕ್ತಾನೆ ಎಂಬ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿಗೆ ನಯವಾಗಿಯೇ ತಿರುಗೇಟು ಕೊಟ್ಟ ಪ್ರೀತಂ ಗೌಡ, ಅವರು ವೈಯುಕ್ತಿಕವಾಗಿ ನನ್ನ ಬಗ್ಗೆ ಮಾತಾನಾಡಿದರೆ ಅವರು ಯಾವಾಗಲೂ ನನ್ನ ಹಿತೈಷಿಯೇ. ನನ್ನ ಬಗ್ಗೆ ವೈಯುಕ್ತಿಕವಾಗಿ ಮಾತನಾಡಿದರೆ ಅವರು ಪ್ರೀತಿಯಿಂದ ಮಾತನಾಡಿರುತ್ತಾರೆ ಎಂದು ಹೇಳಿಕೆ ನೀಡಿದರು.
ಅವರ ಪ್ರೀತಿಯನ್ನು ನಾನು ಆಶೀರ್ವಾದ ಎಂದು ತೆಗೆದುಕೊಂಡಿರುತ್ತೇನೆ. ಅವರ ಆಶೀರ್ವಾದ ಯಾವಾಗಲೂ ನನ್ನ ಮೇಲೆ ಇರುತ್ತದೆ. ಅವರು ಏನು ಬಯಸುತ್ತಾರೆ ಅದನ್ನು ಮಾಡುವುದಕ್ಕೆ ಅವರ ಒಬ್ಬ ಸಹೋದರನಾಗಿ ನಾನು ಹಾಸನದಲ್ಲಿ ಅವರ ಪರವಾಗಿ ಯೋಚನೆ ಮಾಡುತ್ತೇನೆ ಎಂದರು.
ಕುಮಾರಸ್ವಾಮಿ ಅವರು ಯಾವುದೇ ಕಾರಣಕ್ಕೂ ರೇವಣ್ಣ ಅವರ ಮನೆಯವರನ್ನು ಕ್ಯಾಂಡಿಡೇಟ್ ಮಾಡಲ್ಲ ಎಂದು ಶಪಥ ಮಾಡಿದ್ದಾರೆ ಹೊರತು ಪ್ರೀತಂ ಗೌಡನನ್ನು ಚುನಾವಣೆಯಲ್ಲಿ ಸೋಲಿಸುತ್ತೇನೆ ಎಂದು ಶಪಥ ಮಾಡಿಲ್ಲ. ಅವರು ಸಾಮಾನ್ಯ ಕಾರ್ಯಕರ್ತನನ್ನು ಕ್ಯಾಂಡಿಡೇಟ್ ಮಾಡುತ್ತೇನೆ ಎಂದು ಹೇಳಿದ್ದಾರೆ.