Publish Date: Tue, 06 Sep 2022 (16:20 IST)
Updated Date: Tue, 06 Sep 2022 (18:24 IST)
ಆಸ್ಪತ್ರೆಯ ಸಿಬ್ಬಂದಿ ಪತ್ನಿಯ ಕೈಗಿಟ್ಟ ಪ್ರಸಂಗವೊಂದು ನಡೆದಿದೆ. ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ಇಂಥದ್ದೊಂದು ಎಡವಟ್ಟು ಸಂಭವಿಸಿದೆ. ಪದೇಪದೆ ವಿವಾದಗಳ ಕೇಂದ್ರಬಿಂದು ಆಗುತ್ತಿರುವ ಮಿಮ್ಸ್ ಇದೀಗ ಮತ್ತೊಂದು ವಿವಾದಕ್ಕೆ ಈಡಾಗಿದೆ ಎನ್ನಲಾಗುತ್ತಿದೆ.
ಗ್ಯಾಂಗ್ರೀನ್ಗೆ ಒಳಗಾಗಿದ್ದ ಮಂಡ್ಯದ ಕೀಲಾರ ಗ್ರಾಮದ ಪ್ರಕಾಶ್ ಎಂಬವರು ಚಿಕಿತ್ಸೆಗಾಗಿ ಮಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ನೀಡಿದ ವೈದ್ಯರು ಗ್ಯಾಂಗ್ರೀನ್ಗೆ ಒಳಗಾಗಿದ್ದ ಕಾಲನ್ನು ಶಸ್ತ್ರಚಿಕಿತ್ಸೆ ಮಾಡಿ ತೆಗೆದಿದ್ದರು. ಆದರೆ ಅದಾದ ಬಳಿಕ ಆಸ್ಪತ್ರೆ ಸಿಬ್ಬಂದಿ ಕತ್ತರಿಸಲಾಗಿದ್ದ ಕಾಲಿನ ಭಾಗವನ್ನು ತಂದು ಪ್ರಕಾಶ್ ಅವರ ಪತ್ನಿ ಭಾಗ್ಯಮ್ಮ ಅವರಿಗೆ ನೀಡಿದ್ದರು.
ಅದನ್ನು ಸ್ವೀಕರಿಸಿದ ಭಾಗ್ಯಮ್ಮ ತಬ್ಬಿಬ್ಬಾಗಿದ್ದು, ಏನು ಮಾಡಬೇಕು ಎಂದು ತೋಚದೆ ಗಂಡನ ಕಾಲನ್ನು ಹಿಡಿದು ಅತ್ತಿದ್ದರು. ದಾಖಲಾದ ಮೂರು ದಿನಗಳ ಬಳಿಕ ಕತ್ತರಿಸಿದ ಕಾಲನ್ನು ನೀಡಿದ್ದ ಆಸ್ಪತ್ರೆಯವರು, ಅದನ್ನು ಎಲ್ಲಾದರೂ ಮಣ್ಣು ಮಾಡುವಂತೆ ಭಾಗ್ಯಮ್ಮನಿಗೇ ಹೇಳಿದ್ದಾರೆ ಎನ್ನಲಾಗಿದೆ. ತಾವೇ ಮಣ್ಣು ಮಾಡಿದರೆ ಸಾವಿರಾರು ರೂಪಾಯಿ ನೀಡಬೇಕು ಎಂದು ಆಸ್ಪತ್ರೆಯವರು ಕೇಳಿದ್ದಾರೆ ಎಂದು ಭಾಗ್ಯಮ್ಮ ಆರೋಪಿಸಿದ್ದು, ಮಿಮ್ಸ್ ಸಿಬ್ಬಂದಿ ನಡೆ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.