ಬೆಂಗಳೂರು:
ಅರ್ಕಾವತಿ ಬಡಾವಣೆಯ ಭೂಸ್ವಾಧೀನವನ್ನು ಎತ್ತಿ ಹಿಡಿದಿರುವ ಹೈಕೋರ್ಟ್ ಮೂರು ತಿಂಗಳಲ್ಲಿ ಬಾಕಿ ನಿವೇಶನವನ್ನು ಹಂಚುವಂತೆ ಆದೇಶಿಸಿದೆ.
16 ಹಳ್ಳಿಗಳ ಭೂಸ್ವಾಧೀನ ಪ್ರಶ್ನಿಸಿದ್ದ ಅರ್ಜಿಗಳನ್ನು ನ್ಯಾ. ಅರವಿಂದ್ ಕುಮಾರ್ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ ಇತ್ಯರ್ಥಗೊಳಿಸಿದೆ.
ರಿಡೂ, ಡಿನೋಟಿಫಿಕೇಷನ್ ಪರಿಶೀಲನೆಗೆ ಸಮಿತಿ ರಚಿಸಬೇಕೆಂದು ತಿಳಿಸಿರುವ ಕೋರ್ಟ್, ಸುಪ್ರೀಂಕೋರ್ಟ್ ತೀರ್ಪಿಗೆ ಬದ್ಧವಾಗಿ ಕ್ರಮ ಕೈಗೊಳ್ಳಲಾಗಿದೆಯೇ ಎಂದು ಪರಿಶೀಲಿಸುವಂತೆ ಸೂಚಿಸಿದೆ. ನಿವೃತ್ತ ನ್ಯಾ.ಕೆ.ಎನ್.ಕೇಶವನಾರಾಯಣ, ನಿವೃತ್ತ ಐಎಎಸ್ ಅಧಿಕಾರಿ ಸಂದೀಪ್ ದವೆ, ನಿವೃತ್ತ ಪೊಲೀಸ್ ಅಧಿಕಾರಿ ಎನ್.ಎಸ್.ಮೇಘರಿಕ್ ತ್ರಿಸದಸ್ಯ ಸಮಿತಿಯನ್ನು ಕೋರ್ಟ್ ರಚಿಸಿದೆ. ಸಮಿತಿ 16 ಹಳ್ಳಿಗಳ ಭೂಸ್ವಾಧೀನವನ್ನು ಪರಿಶೀಲನೆ ನಡೆಸಲಿದ್ದು, ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.
ಹಂಚಿಕೆಯಾದ ಜನರಿಗೆ ನಿವೇಶನ ಒದಗಿಸಬೇಕು. ಹಂಚಿಕೆಯಾದವರಿಗೆ ಮಾರಾಟ ಒಪ್ಪಂದ ಮಾಡಿಕೊಡಬೇಕು. 2003 ಫೆಬ್ರವರಿ 3ಕ್ಕಿಂತ ಮೊದಲಿರುವ ಮನೆಗಳು ಪಕ್ಕಾ ಕಟ್ಟಡಗಳಾಗಿದ್ದರೆ ಮಾತ್ರ ಉಳಿಯಲಿವೆ. ಆದರೆ ಸಿಮೆಂಟ್ ಶೀಟ್, ಹಂಚಿನ ಚಾವಣಿ ಹೊಂದಿರುವ ಕಟ್ಟಡಗಳನ್ನು ಪಕ್ಕಾ ಕಟ್ಟಡಗಳೆಂದು ಪರಿಗಣಿಸಲಾಗಿಲ್ಲ. ಈ ಬಗ್ಗೆಯೂ ಬಿಡಿಎಗೆ ವರದಿ ನೀಡಲು ಸಮಿತಿಗೆ ಸೂಚಿಸಲಾಗಿದೆ.