Publish Date: Fri, 03 Sep 2021 (09:36 IST)
Updated Date: Fri, 03 Sep 2021 (09:39 IST)
ಬೆಂಗಳೂರು : 'ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಪಕ್ಕದಲ್ಲಿರುವ ಸಾದರಹಳ್ಳಿ ಬಂಡೆ ಮತ್ತು ಸುತ್ತಮುತ್ತ ಯಾವುದೇ ಅಕ್ರಮ ಗಣಿಗಾರಿಕೆಗೆ ನಡೆಯದಂತೆ ನೋಡಿಕೊಳ್ಳಬೇಕು' ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ನಿವೃತ್ತ ಐಪಿಎಸ್ ಅಧಿಕಾರಿ ಎಸ್. ಮರಿಸ್ವಾಮಿ ಹಾಗೂ ಸ್ಥಳೀಯ ನಿವಾಸಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ನೇತೃತ್ವದ ವಿಭಾಗೀಯ ಪೀಠ, ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದೆ.
'ಈ ಗಣಿಗಾರಿಕೆ ಕ್ವಾರಿಗಳ ಸುತ್ತ ಈಗ ವಸತಿ ಬಡಾವಣೆಗಳು ನಿರ್ಮಾಣವಾಗಿವೆ. ಜೇಡ್ ಗಾರ್ಡನ್ ಲೇಔಟ್, ಹಾಲಿವುಡ್ ಟೌನ್ ರೆಸಿಡೆನ್ಷಿಯಲ್ ಲೇಔಟ್, ಸ್ವಿಸ್ ಟೌನ್ ಲೇಔಟ್ ಸುತ್ತಮುತ್ತಲ ಪ್ರದೇಶಗಳಿಂದ ಕೇವಲ 100ರಿಂದ 200 ಮೀಟರ್ ದೂರದಲ್ಲೇ ಗಣಿಗಾರಿಕೆ ಚಟುವಟಿಕೆಗಳು ನಡೆಯುತ್ತಿವೆ' ಎಂದು ಅರ್ಜಿದಾರರು ತಿಳಿಸಿದ್ದಾರೆ.
'ಗಣಿಗಾರಿಕೆಯು ನಿವಾಸಿಗಳ ಮೇಲೆ, ಅದರಲ್ಲೂ ಹಿರಿಯ ನಾಗರಿಕರ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಕ್ವಾರಿಯ ದೂಳು ಹಲವರ ಸಾವಿಗೂ ಕಾರಣವಾಗಿವೆ. 'ಸಿಲಿಕೋಸಿಸ್' ರೀತಿಯ ರೋಗಗಳಿಗೂ ಜನ ತುತ್ತಾಗುತ್ತಿದ್ದಾರೆ. ಶ್ವಾಸಕೋಶದಲ್ಲಿ ಕೊರೊನಾ ವೈರಾಣು ಮಾಡುವುದಕ್ಕಿಂತ ಹೆಚ್ಚು ಹಾನಿಯನ್ನು ಈ ದೂಳು ಮಾಡುತ್ತಿದೆ' ಎಂದು ಅರ್ಜಿದಾರರು ವಿವರಿಸಿದ್ದಾರೆ.
'ಅಕ್ರಮ ಗಣಿಗಾರಿಕೆ ಸಂಬಂಧ ಲೋಕಾಯುಕ್ತಕ್ಕೂ ಈ ಹಿಂದೆ ದೂರು ನೀಡಲಾಗಿತ್ತು. ಲೋಕಾಯುಕ್ತ ತನಿಖೆ ಬಳಿಕ 2018ರಲ್ಲಿ ಅಕ್ರಮ ಗಣಿಗಾರಿಕೆ ಸ್ಥಗಿತಗೊಂಡಿತ್ತು. ಇದೇ ಜಾಗದಲ್ಲಿ ಮತ್ತೆ ಗಣಿಗಾರಿಕೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅನುಮತಿ ನೀಡಿರುವ ಅನುಮಾನ ಇದೆ' ಎಂದು ಅರ್ಜಿದಾರರು ಹೇಳಿದ್ದಾರೆ.
Ramya kosira
Publish Date: Fri, 03 Sep 2021 (09:36 IST)
Updated Date: Fri, 03 Sep 2021 (09:39 IST)