Publish Date: Sat, 06 Jul 2024 (13:04 IST)
Updated Date: Sat, 06 Jul 2024 (13:06 IST)
ಬೆಂಗಳೂರು: ಕುಮಾರಸ್ವಾಮಿ ಒಬ್ಬ ಹುಚ್ಚ. ಅವರನ್ನು ಆಸ್ಪತ್ರೆಗೆ ಸೇರಿಸುವುದು ಒಳ್ಳೆಯದು ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದರು. ಅವರ ಹೇಳಿಕೆಗೆ ಈಗ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ನನಗೆ ಹುಚ್ಚು ಎನ್ನುವವರಿಗೆ ಸಿಎಂ ಪಟ್ಟದ ಹುಚ್ಚು ಹಿಡಿದಿದೆ ಎಂದು ಮತ್ತೊಮ್ಮೆ ಡಿಕೆಶಿ ಹೆಸರು ಹೇಳದೇ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಉಪಮುಖ್ಯಮಂತ್ರಿಗಳು ಮೊದಲು ತಮ್ಮ ಹುಚ್ಚನ್ನು ಪರೀಕ್ಷೆ ಮಾಡಿಕೊಳ್ಳಲಿ ಎಂದು ಟಾಂಗ್ ಕೊಟ್ಟಿದ್ದಾರೆ.
ಮುಡಾ ಹಗರಣದ ಬಗ್ಗೆ ಪ್ರತಿಕ್ರಿಯಿಸಿದ್ದ ಕುಮಾರಸ್ವಾಮಿ, ಇದೆಲ್ಲಾ ಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟಿರುವವರಿಂದಲೇ ಹೊರಬಂದಿರುವ ಹಗರಣ ಎಂದಿದ್ದರು. ಇದಕ್ಕೆ ಪ್ರತಿಯಾಗಿ ಡಿಕೆಶಿ, ಕೇಂದ್ರ ಸಚಿವ ಕುಮಾರಸ್ವಾಮಿ ಒಬ್ಬ ಹುಚ್ಚ ಎಂದಿದ್ದರು. ಅವರ ಮಾತಿನ ಚಕಮಕಿ ಮತ್ತೆ ಮುಂದುವರಿದಿದೆ.
ಡಿಕೆಶಿ ಹೇಳಿಕೆಗೆ ಈಗ ಕುಮಾರಸ್ವಾಮಿ ಕೂಡಾ ತಿರುಗೇಟು ನೀಡಿದ್ದಾರೆ. ನಿನ್ನೆಯಷ್ಟೇ ಜನತಾ ದರ್ಶನ ನಡೆದಿದ್ದ ಕುಮಾರಸ್ವಾಮಿ ವಿರುದ್ಧವೂ ಡಿಕೆಶಿ ವ್ಯಂಗ್ಯ ಮಾಡಿದ್ದರು. ಕುಮಾರಸ್ವಾಮಿಗೆ ಜನತಾ ದರ್ಶನ ಮಾಡುವ ಅಧಿಕಾರವಿಲ್ಲ ಎಂದಿದ್ದರು. ಕುಮಾರಸ್ವಾಮಿ ಜನತಾ ದರ್ಶನಕ್ಕೆ ಅಧಿಕಾರಿಗಳು ಗೈರಾಗಿದ್ದು ಭಾರೀ ಸುದ್ದಿಯಾಗಿತ್ತು.