Publish Date: Tue, 30 Apr 2024 (09:12 IST)
Updated Date: Tue, 30 Apr 2024 (09:17 IST)
ಹಾಸನ: ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ಹೊರಗೆ ಬರುತ್ತಿದ್ದಂತೇ ಜೆಡಿಎಸ್ ಧುರೀಣ ಎಚ್ ಡಿ ದೇವೇಗೌಡರ ಕುಟುಂಬ ಈಗ ಒಡೆದ ಮನೆಯಂತಾಗಿದೆ. ಕುಮಾರಸ್ವಾಮಿ ಮತ್ತು ರೇವಣ್ಣ ಕುಟುಂಬದ ನಡುವಿನ ಒಡಕು ಬಯಲಾಗಿದೆ.
ಈ ಮೊದಲೇ ಎಚ್ ಡಿ ರೇವಣ್ಣ ಮತ್ತು ಎಚ್ ಡಿ ಕುಮಾರಸ್ವಾಮಿ ಕುಟುಂಬದ ನಡುವೆ ಒಡಕು ಬಗ್ಗೆ ಗುಸು ಗುಸು ಕೇಳಿಬರುತ್ತಲೇ ಇತ್ತು. ಈ ಹಿಂದೆ ಲೋಕಸಭೆ ಚುನಾವಣೆಗೆ ಪ್ರಜ್ವಲ್ ರೇವಣ್ಣಗೆ ಹಾಸನ ಟಿಕೆಟ್ ನೀಡುವ ವಿಚಾರದಿಂದ ಹಿಡಿದು ಇಲ್ಲಿಯವರೆಗೆ ಈ ಅಣ್ಣ-ತಮ್ಮನ ಕುಟುಂಬದ ನಡುವೆ ಆಗಾಗ ಅಸಮಾಧಾನ ಹೊರಗಿನವರಿಗೂ ಕಾಣುವಂತಿತ್ತು.
ಆದರೆ ಇದೆಲ್ಲಾ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳಷ್ಟೇ ಎಂದು ಇಬ್ಬರೂ ನಾಯಕರು ತಿಪ್ಪೇ ಸಾರುತ್ತಿದ್ದರು. ಆದರೆ ಈಗ ಪ್ರಜ್ವಲ್ ರೇವಣ್ಣ ಕೇಸ್ ನಿಂದಾಗಿ ಇಡೀ ಗೌಡರ ಕುಟುಂಬಕ್ಕೆ ಮಸಿ ಬಳಿಯುತ್ತಿದ್ದಂತೇ ಕುಟುಂಬದ ಒಡಕು ಬಯಲಾಗಿದೆ. ಎಚ್ ಡಿ ಕುಮಾರಸ್ವಾಮಿ ನೇರವಾಗಿ ನಾನೂ ರೇವಣ್ಣ ಬೇರೆಯಾಗಿರುವುದಾಗಿ ಹೇಳಿಕೊಂಡಿದ್ದಾರೆ. ಅದು ನನ್ನ ಕುಟುಂಬವಲ್ಲ ಎಂದಿದ್ದಾರೆ. ನಾನು ಮತ್ತು ಎಚ್ ಡಿ ದೇವೇಗೌಡರು ಹೆಣ್ಣಿನ ವಿಚಾರದಲ್ಲಿ ಯಾವತ್ತೂ ಗೌರವಯುತವಾಗಿ ನಡೆದುಕೊಂಡಿದ್ದೇವೆ. ನಮ್ಮನ್ನು ಈ ಪ್ರಕರಣದಲ್ಲಿ ಎಳೆದು ತರಬೇಡಿ ಎಂದಿದ್ದಾರೆ.
ಈ ಬಗ್ಗೆ ಎಸ್ ಐಟಿ ತನಿಖೆಯಾಗಲಿ. ವಿಡಿಯೋ ಮಾಡಿದವರು ಯಾರು ಎಂದೂ ಬಹಿರಂಗವಾಗಲಿ ಎಂದಿದ್ದಾರೆ. ಪ್ರಜ್ವಲ್ ರೇವಣ್ಣ ಒಂದು ಪ್ರಕರಣದಿಂದ ಇಡೀ ಗೌಡರ ಕುಟುಂಬಕ್ಕೆ ಮತ್ತು ಜೆಡಿಎಸ್ ಗೆ ಕಳಂಕ ಮೆತ್ತಿಕೊಂಡಿದೆ. ರಾಜ್ಯದಲ್ಲಿ ಜೆಡಿಎಸ್ ಉಳಿದಿರುವುದೇ ಕಷ್ಟ ಎಂಬ ಸ್ಥಿತಿಯಲ್ಲಿ ಇಂತಹದ್ದೊಂದು ಪ್ರಹಾರ ಆ ಪಕ್ಷಕ್ಕೆ ದೊಡ್ಡ ಹೊಡೆತ ನೀಡಿದೆ. ಹೀಗಾಗಿಯೇ ಕುಮಾರಸ್ವಾಮಿ ತೀರಾ ಸಿಟ್ಟಾಗಿದ್ದಾರೆ.