ಹಾವೇರಿ: ಹಿಂದೂ ಯುವತಿ ಸ್ವಾತಿ ಹತ್ಯೆಗೆ ಆರೋಪಿ ನಯಾಜ್ ಭಯಂಕರ ಐಡಿಯಾ ಮಾಡಿದ್ದ ಎಂಬ ವಿಚಾರ ಈಗ ಬಯಲಿಗೆ ಬಂದಿದೆ. ಇಲ್ಲಿದೆ ಹತ್ಯೆಯ ವಿವರ.
ಸ್ವಾತಿ ಮತ್ತು ನಯಾಜ್ ನಡುವೆ ಪ್ರೇಮ ಸಂಬಂಧವಿತ್ತು. ಇಬ್ಬರಿಗೂ ಹೋರಿ ಬೆದರಿಸುವ ಸ್ಪರ್ಧೆ ಎಂದರೆ ಕ್ರೇಜ್. ಹೀಗೆಯೇ ಇಬ್ಬರ ನಡುವೆ ಪರಿಚಯವಾಗಿ ಪ್ರೇಮಕ್ಕೆ ತಿರುಗಿತ್ತು. ನಯಾಜ್ ಸ್ನೇಹಿತ ವಿನಯ್, ದುರ್ಗಾಚಾರಿ ಎಂಬವರೂ ಸ್ವಾತಿಗೆ ಪರಿಚಿತರಾಗಿದ್ದರು.
ಇತ್ತೀಚೆಗೆ ನಯಾಜ್ ಸ್ವಾತಿಯನ್ನು ಬಿಟ್ಟು ತನ್ನ ಧರ್ಮದ ಹುಡುಗಿಯನ್ನು ಮದುವೆಯಾಗಲು ಹೊರಟಿದ್ದ. ಇದರ ಬಗ್ಗೆ ಸ್ವಾತಿ ನಯಾಜ್ ನನ್ನು ತರಾಟೆಗೆ ತೆಗೆದುಕೊಂಡಿದ್ದಳು. ಅಲ್ಲದೆ, ಬೇರೆ ಮದುವೆಯಾಗದಂತೆ ಕಿರಿ ಕಿರಿ ಮಾಡುತ್ತಿದ್ದಳು.
ಇದರಿಂದ ಕೆರಳಿದ್ದ ನಯಾಜ್ ತನ್ನ ಸ್ನೇಹಿತ ವಿನಯ್, ದುರ್ಗಾಚಾರಿ ಸಹಾಯದಿಂದ ಕೊಲೆಗೆ ಸ್ಕೆಚ್ ಹಾಕಿದ್ದ. ಅದರಂತೆ ನಯಾಜ್ ಮತ್ತು ಸ್ನೇಹಿತರು ಕಾರಿನಲ್ಲಿ ಉಪಾಯವಾಗಿ ಸ್ವಾತಿಯನ್ನು ಕರೆದುಕೊಂಡು ರಾಣೆಬೆನ್ನೂರು ಹೊರವಲಯದ ಸುವರ್ಣ ಪಾರ್ಕ್ ಗೆ ಕರೆದೊಯ್ದಿದ್ದರು.
ದಾರಿ ಮಧ್ಯೆಯೇ ಸ್ವಾತಿಯನ್ನು ನಯಾಜ್ ಟವೆಲ್ ನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ಬಳಿಕ ಮೂವರೂ ಸೇರಿಕೊಂಡು ಮೃತದೇಹವನ್ನು ಢಿಕ್ಕಿಯಲ್ಲಿ ತೆಗೆದುಕೊಂಡು ಹೋಗಿ ತುಂಗಭದ್ರಾ ನದಿಗೆ ಎಸೆದಿದ್ದರು. ತುಂಗಭದ್ರಾ ನದಿಯಲ್ಲಿ ಅಪರಿಚಿತ ಶವ ನೋಡಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಪ್ರಕರಣ ಹೊರಗೆ ಬಂದಿದೆ.