Publish Date: Thu, 14 Aug 2025 (10:24 IST)
Updated Date: Thu, 14 Aug 2025 (10:27 IST)
ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಎಂದು ಬೀಗುತ್ತಲೇ ಇರುತ್ತದೆ. ಆದರೆ ಗೃಹಲಕ್ಷ್ಮಿ ಹಣ ಮಾತ್ರ ಸರಿಯಾಗಿ ಫಲಾನುಭವಿಗಳ ಖಾತೆಗೆ ಬರುತ್ತಿಲ್ಲ ಎಂಬುದು ಮಾತ್ರ ಸತ್ಯವಾಗಿದೆ.
ಪ್ರತೀ ತಿಂಗಳು ಮನೆಯ ಯಜಮಾನಿಯ ಖಾತೆಗೆ 2,000 ರೂ. ನೀಡುವ ಗೃಹಲಕ್ಷ್ಮಿ ಯೋಜನೆ ಬಗ್ಗೆ ಈಗ ಮಹಿಳೆಯರೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಕಾರಣ, ಸರ್ಕಾರ ಭರವಸೆ ನೀಡಿದಂತೆ ಪ್ರತೀ ತಿಂಗಳು ಹಣ ಮಾತ್ರ ಬರುತ್ತಿಲ್ಲ ಎನ್ನುವುದು ಮಹಿಳೆಯರ ಆಕ್ರೋಶಕ್ಕೆ ಕಾರಣವಾಗಿದೆ.
ಇದೀಗ ಹಬ್ಬದ ಸೀಸನ್. ಮೊನ್ನೆಯಷ್ಟೇ ವರಮಹಾಲಕ್ಷ್ಮಿ ಹಬ್ಬಕ್ಕೆ ಹಣ ಬರಬಹುದು ಎಂದು ಮಹಿಳೆಯರು ಕಾಯುತ್ತಿದ್ದರು. ಆದರೆ ಬಂದಿರಲಿಲ್ಲ. ಗಣೇಶ ಹಬ್ಬ ಬರುತ್ತಿದೆ. ಆದರೆ ಇನ್ನೂ ಮೂರು ತಿಂಗಳಿನ ಹಣ ಬಾಕಿ ಬಂದಿಲ್ಲ.
ಹೀಗಾಗಿ ಮಹಿಳೆಯರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ವರಮಹಾಲಕ್ಷ್ಮಿ ಹಬ್ಬ ಚೆನ್ನಾಗಿ ಮಾಡಬಹುದು ಎಂದುಕೊಂಡಿದ್ದೆವು. ಈಗ ಬೆಲೆಯೂ ದುಬಾರಿ. ಹಬ್ಬಕ್ಕೆ ಖರೀದಿ ಮಾಡಲು ಹಣವಿಲ್ಲ. ಆದರೆ ಗೃಹಲಕ್ಷ್ಮಿ ಹಣ ಮೂರು ತಿಂಗಳಿನಿಂದ ಬಂದಿಲ್ಲ. ಸರ್ಕಾರದ ರೊಕ್ಕ ಯಾವಾಗ ಬರುತ್ತೋ ಗೊತ್ತಿಲ್ಲ. ಹೀಗಿದ್ದ ಮೇಲೆ ಹಣ ಕೊಡ್ತೀವಿ ಎಂದು ಭರವಸೆ ನೀಡೋದು ಯಾಕೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.