Select Your Language

Notifications

webdunia
webdunia
webdunia
webdunia

ನಗರ ಪ್ರದೇಶದಲ್ಲಿ ಒಂದು ಲಕ್ಷ ಮನೆಗಳನ್ನು ನಿರ್ಮಿಸಲು ಸರ್ಕಾರ ವಿಶೇಷ ಒತ್ತು

ನಗರ ಪ್ರದೇಶದಲ್ಲಿ ಒಂದು ಲಕ್ಷ ಮನೆಗಳನ್ನು ನಿರ್ಮಿಸಲು  ಸರ್ಕಾರ ವಿಶೇಷ ಒತ್ತು
bangalore , ಭಾನುವಾರ, 12 ಜೂನ್ 2022 (20:56 IST)
ನಗರ ಪ್ರದೇಶದಲ್ಲಿ ಒಂದು ಲಕ್ಷ ಮನೆಗಳನ್ನು ನಿರ್ಮಿಸಲು  ಸರ್ಕಾರ ವಿಶೇಷ ಒತ್ತು ನೀಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
 
ಅವರು ಇಂದು ರಾಜರಾಜೇಶ್ವರಿನಗರ ವಿಧಾನಸೌಧದ ವ್ಯಾಪ್ತಿಯಲ್ಲಿನ ಕೊಳಗೇರಿ ನಿವಾಸಿಗಳಿಗೆ ಪ್ರಧಾನಮಂತ್ರಿ ಆವಾಸ್ ಯೋಜನೆ  ಸರ್ವರಿಗೂ ಸೂರು ಯೋಜನೆಯಡಿ 1588 ಮನೆಗಳ ನಿರ್ಮಾಣ  ಕಾಮಗಾರಿಗಳಿಗೆ ಶಂಕುಸ್ಥಾಪನೆ  ನೆರವೇರಿಸಿ ಹಕ್ಕುಪತ್ರಗಳನ್ನು ವಿತರಿಸಿ ಮಾತನಾಡುತ್ತಿದ್ದರು. 
 
ಬ್ಯಾಂಕುಗಳಿಗೆ ಸರ್ಕಾರದ  ಗ್ಯಾರಂಟಿ
ಸರ್ಕಾರವು 52 ಸಾವಿರ ಮನೆಗಳನ್ನು  ಪೂರ್ತಿ ಮಾಡಿದ್ದು,  ಇನ್ನು 50 ಸಾವಿರ ಮನೆಗಳಿಗೆ ನಾವು ಈ ವರ್ಷ ಕಾರ್ಯಾದೇಶ ನೀಡಿದ್ದೇವೆ. ಫಲಾನುಭವಿಗಳಿಂದ ವಂತಿಗೆ ಬರುವುದು ತಡವಾಗುತ್ತಿದ್ದು, ಅವುಗಳನ್ನು ಪೂರ್ಣಮಾಡಲು ತಡವಾಗುತ್ತಿದೆ ಎಂದು ಸರ್ಕಾರ ಮನಗಂಡಿದೆ. ಮನೆಗಳನ್ನು ಕಟ್ಟಿದ ಸಂದರ್ಭದಲ್ಲಿ ಫಲಾನುಭವಿಗಳಿಗೆ ವಂತಿಕೆಯನ್ನು ಕೊಡುವುದು ಕಷ್ಟಸಾಧ್ಯವಾಗುತ್ತಿದೆ ಎನ್ನುವುದನ್ನು ಅರಿತು,  ಅದಕ್ಕಾಗಿ  ಸುಮಾರು ಬಡವರ ಪರವಾಗಿ ಬ್ಯಾಂಕುಗಳಿಗೆ  ಸರ್ಕಾರ ಗ್ಯಾರಂಟಿ ಕೊಟ್ಟು 500 ಕೋಟಿ ರೂ.ಗಳನ್ನು ಸಾಲ ಪಡೆಯಲಾಗುವುದು. ಇದರಿಂದಾಗಿ ಸಮಸ್ಯೆಗೆ ಪರಿಹಾರ ನೀಡಿದಂತಾಗುತ್ತದೆ. ಮನೆ ಪೂರ್ತಿಯಾದಾಗ ಕಂತಿನಲ್ಲಿ ನೀಡುವ ವ್ಯವಸ್ಥೆ ಮಾಡುತ್ತೇವೆ. ಬಡವರಿಗೆ ಸಹಾಯ ಮಾಡಲು ಎಲ್ಲೆಲ್ಲಿ ಸಾಧ್ಯವಿದೆಯೋ ಅದನ್ನು ಮಾಡುತ್ತಿದ್ದೇವೆ ಎಂದರು.
ಅಧಿಕಾರ  ವಹಿಸಿಕೊಂಡ ಸಂದರ್ಭದಲ್ಲಿ ಬೆಂಗಳೂರಿಗೆ ನಗರೋತ್ಥಾನ ಯೋಜನೆಯನ್ನು ಘೋಷಿಸಿ,  ಕೊಳಚೆ ಪ್ರದೇಶಗಳ ಅಭಿವೃದ್ಧಿಯಾಗಬೇಕು, ಬಡವರು ಇರುವ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಮತ್ತು ಕೆರೆಗಳ ರಕ್ಷಣೆಯಾಗಬೇಕು ಎನ್ನುವ ವಿಚಾರಗಳನ್ನು ಸೇರಿಸಲಾಯಿತು. ಅದರ ಭಾಗವಾಗಿ ಇಂದು  1588 ಜನರಿಗೆ ಮನೆಗಳ ನಿರ್ಮಾಣ ಕಾಮಗಾರಿಯಾಗಲಿದೆ ಎಂದರು.
 
ಬಡವರಿಗಾಗಿ ಐದು ಸಾವಿರ ಎಕರೆ ಸರ್ಕಾರಿ ಜಮೀನು ಮೀಸಲು:
ದೇಶದಲ್ಲಿ ಬಡವರ ತಲೆಯ ಮೇಲೆ ಸೂರಿಲ್ಲ ಎನ್ನುವುದು ದೇಶವ್ಯಾಪಿ ಸಮಸ್ಯೆ. ಇದನ್ನು ಹೋಗಲಾಡಿಸುವ ದೊಡ್ಡ ಪ್ರಯತ್ನ ರಾಜ್ಯದಲ್ಲಿ ಆಗುತ್ತಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆಯನ್ನು ಬೃಹತ್ ಪ್ರಮಾಣದಲ್ಲಿ ತೆಗೆದುಕೊಂಡು ಮುಂದಿನ 5 ವರ್ಷಗಳಲ್ಲಿ ಎಲ್ಲರ ತಲೆಯ ಮೇಲೆ ಸೂರು ಇರಬೇಕೆನ್ನುವ ವಿಚಾರವನ್ನು ಇಟ್ಟುಕೊಂಡು ಕಾರ್ಯಕ್ರಮ ರೂಪಿಸಲಾಗಿದೆ. ಕರ್ನಾಟಕದಲ್ಲಿ ದೇವರಾಜ ಅರಸು ಅವರ ಕಾಲದಿಂದಲೂ ಮನೆಗಳ ನಿರ್ಮಾಣಕ್ಕೆ ವಿಶೇಷ ಪ್ರಯತ್ನಗಳಾಗಿವೆ. ಆದರೆ ಬೆಳೆಯುತ್ತಿರುವ ಜನಸಂಖ್ಯೆಯಿಂದಾಗಿ ಮನೆಗಳ ನಿರ್ಮಾಣ ದೊಡ್ಡ ಸವಾಲಾಗಿದೆ. ಘೋಷಣೆ ಮಾಡಬಹುದು. ಆದರೆ ಅದರ ಅನುಷ್ಠಾನದಲ್ಲಿನ ಸಮಸ್ಯೆಗಳ ಅರಿವು ಕರ್ನಾಟಕ ಸರ್ಕಾರಕ್ಕಿದೆ.  ನಮ್ಮ ಸರ್ಕಾರ ಈಗ  5  ಲಕ್ಷ ಮನೆ ಪೂರ್ಣಗೊಳಿಸುತ್ತಿದೆ. ಕಟ್ಟಿರುವ ಮನೆಗಳನ್ನು ಪೂರ್ಣಗೊಳಿಸುವ ಸಂಕಲ್ಪ ನಮ್ಮ ಸರ್ಕಾರ ಮಾಡಿದೆ.  ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 1.75 ಲಕ್ಷ ನೀಡುತ್ತಿದ್ದ ಮೊತ್ತವನ್ನು 2 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ. ಜಮೀನಿನ ಸಮಸ್ಯೆ ಬಗೆಹರಿಸಲು 5000 ಸರ್ಕಾರಿ ಜಮೀನು ಗುರುತಿಸಲಾಗಿದ್ದು, ಬಡವರಿಗಾಗಿ ಇದನ್ನು ಮೀಸಲಿಟ್ಟು, ಅಲ್ಲಿ ನಿವೇಶನ ಮತ್ತು ಮನೆ ಕೊಡುವ ಕೆಲಸವನ್ನು ಸರ್ಕಾರ ಮಾಡಲಿದೆ ಎಂದರು.
 
ಕಾಲಮಿತಿಯಲ್ಲಿ ಮನೆಗಳ ನಿರ್ಮಾಣ 
 
ಪರಿಹಾರದ ರಾಜಕಾರಣವಾಗಬೇಕು.  ಚರ್ಚೆಯ ರಾಜಕಾರಣವಲ್ಲ. ಜನರ ಸಮಸ್ಯೆ ಇದ್ದಲ್ಲಿಗೆ ಹೋಗಿ ಅರಿವಿನಿಂದ ಕೆಲಸ ಮಾಡಬೇಕು.  ಪ್ರವಾಹದ ಸಂದರ್ಭದಲ್ಲಿ ಬೆಳೆ ಹಾನಿಗೆ ಕೇಂದ್ರ ಸರ್ಕಾರ 11000 ರೂ.ಗಳನ್ನು ನೀಡಿದರೆ, ರಾಜ್ಯ ಸರ್ಕಾರವೂ ಅಷ್ಟೇ ಮೊತ್ತವನ್ನು ಹಾಕಿ 22 ಸಾವಿರ ರೂ.ಗಳನ್ನು ನಮ್ಮ ಸರ್ಕಾರ ನೀಡಿದೆ.  1588 ಮನೆ ನಿರ್ಮಾಣಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ನಿಗದಿತ ಸಮಯದಲ್ಲಿ ಪೂರ್ಣಗೊಳಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡಲಿದೆ. ಜನರ ನಿರೀಕ್ಷೆಗೆ ತಕ್ಕಹಾಗೆ ನಮ್ಮ ಸರ್ಕಾರ ಮಾಡಲಿದೆ ಎಂದರು. ಮುಂದಿನ ದಿನಗಳಲ್ಲಿ ವಸತಿ ಇಲಾಖೆ ಮತ್ತು ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ  ಕೊಳಚೆ ಪ್ರದೇಶಗಳ ಎಲ್ಲ ಮನೆಗಳಿಗೂ ಕಾಯಕಲ್ಪ ನೀಡಬೇಕು ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಆಸ್ಪತ್ರೆಗೆ ದಾಖಲಾದ ಸೋನಿಯಾ ಗಾಂಧಿ!