Publish Date: Tue, 25 Mar 2025 (19:24 IST)
Updated Date: Tue, 25 Mar 2025 (19:36 IST)
ಬೆಂಗಳೂರು: 12 ಕೋಟಿ ಮೌಲ್ಯದ 15ಕೆಜಿ ಚಿನ್ನವನ್ನು ಅಕ್ರಮವಾಗಿ ಸಾಗಿಸುವ ವೇಳೆ ಸಿಕ್ಕಿಬಿದ್ದು ಜೈಲುಪಾಲಾಗಿರುವ ನಟಿ ರನ್ಯಾ ರಾವ್ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಮಂಗಳವಾರ ಪೂರ್ಣಗೊಳಿಸಿದ ವಿಶೇಷ ನ್ಯಾಯಾಲಯ ಮಾರ್ಚ್ 27ಕ್ಕೆ ತೀರ್ಪು ಕಾಯ್ದಿರಿಸಿದೆ.
ರನ್ಯಾ ರಾವ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ 64ನೇ ಸಿಸಿಹೆಚ್ ಕೋರ್ಟ್, ಪ್ರತಿವಾದಿ ಮತ್ತು ಪ್ರಾಸಿಕ್ಯೂಷನ್ ಎರಡೂ ಕಡೆಯ ವಿವರವಾದ ವಾದಗಳನ್ನು ಆಲಿಸಿ, ಆದೇಶವನ್ನು ಇದೀಗ ಕಾಯ್ದಿರಿಸಿದೆ.
ವಿಚಾರಣೆಯ ಸಮಯದಲ್ಲಿ, ರನ್ಯಾ ರಾವ್ ಪರ ವಕೀಲ ಕಿರಣ್ ಜವಳಿ ಅವರು, ತಮ್ಮ ಕಕ್ಷಿದಾರರಿಗೆ ಜಾಮೀನು ನೀಡುವಂತೆ ವಾದ ಮಂಡಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಕಂದಾಯ ಗುಪ್ತಚರ ನಿರ್ದೇಶನಾಲಯದ(ಡಿಆರ್ಐ) ವಕೀಲ ಮಧು ರಾವ್ ಅವರು ಅಕ್ರಮ ಹಣ ವರ್ಗಾವಣೆಯಲ್ಲಿ ಅವರ ನೇರ ಪಾತ್ರವನ್ನು ಸೂಚಿಸುವ ಪುರಾವೆಗಳಿವೆ ಎಂದರು.
ಪ್ರಾಸಿಕ್ಯೂಷನ್ ಪ್ರಕಾರ, ನಟಿ ಚಿನ್ನ ಖರೀದಿಗೆ ಅನುಕೂಲವಾಗುವಂತೆ ಹವಾಲಾ ಮಾರ್ಗಗಳನ್ನು ಬಳಸಿರುವುದಾಗಿ ಒಪ್ಪಿಕೊಂಡಿದ್ದಾರೆ, ಇದು ಅವರ ವಿರುದ್ಧದ ಪ್ರಕರಣವನ್ನು ಬಲಪಡಿಸುತ್ತದೆ.
ಕಾನೂನು ಪ್ರಕ್ರಿಯೆಯ ಭಾಗವಾಗಿ, ಅಧಿಕಾರಿಗಳು ಕಸ್ಟಮ್ಸ್ ಕಾಯ್ದೆಯ ಸೆಕ್ಷನ್ 108 ಅನ್ನು ಅನ್ವಯಿಸಿದ್ದಾರೆ, ಇದು ನ್ಯಾಯಾಂಗ ತನಿಖೆಯನ್ನು ಕಡ್ಡಾಯಗೊಳಿಸುತ್ತದೆ ಎಂದರು.