Publish Date: Thu, 02 May 2024 (15:33 IST)
Updated Date: Thu, 02 May 2024 (15:35 IST)
ಶಿವಮೊಗ್ಗ: ಇಂದು ಶಿವಮೊಗ್ಗದಲ್ಲಿ ಕಾಂಗ್ರೆಸ್ ಬೃಹತ್ ಚುನಾವಣಾ ಸಮಾವೇಶ ನಡೆಸಿದ್ದು, ರಾಹುಲ್ ಗಾಂಧಿ, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆಯಂತಹ ಘಟಾನುಘಟಿ ನಾಯಕರು ಪ್ರಚಾರ ನಡೆಸಿದ್ದಾರೆ.
ಶಿವಮೊಗ್ಗದಿಂದ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೀತಾ ಶಿವರಾಜ್ ಕುಮಾರ್ ಸ್ಪರ್ಧಿಸುತ್ತಿದ್ದಾರೆ. ಹೀಗಾಗಿ ಸಮಾವೇಶಕ್ಕೆ ಗೀತಾ ಜೊತೆಗೆ ಶಿವರಾಜ್ ಕುಮಾರ್ ಕೂಡಾ ಆಗಮಿಸಿದ್ದರು. ಈ ವೇಳೆ ಸಿದ್ದರಾಮಯ್ಯನವರನ್ನು ಭೇಟಿಯಾದ ಗೀತಾ ಶಿವರಾಜ್ ಕುಮಾರ್ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡಿದ್ದಾರೆ.
ಇನ್ನೊಂದೆಡೆ ಶಿವಣ್ಣ ಕೂಡಾ ಸಿದ್ದರಾಮಯ್ಯನವರ ಜೊತೆ ಆತ್ಮೀಯವಾಗಿ ಕಾಲ ಕಳೆದರು. ಶಿವಣ್ಣನನ್ನು ಕಂಡ ಕೂಡಲೇ ಬಾಚಿ ತಬ್ಬಿಕೊಂಡ ಸಿದ್ದರಾಮಯ್ಯ ಕುಶಲೋಪರಿ ನಡೆಸಿದ್ದಾರೆ. ಶಿವಮೊಗ್ಗದ ಇಂದಿನ ಪ್ರಚಾರ ಸಭೆಯಲ್ಲಿ ಈ ಎರಡು ಫೋಟೋಗಳು ಎಲ್ಲರ ಗಮನ ಸೆಳೆಯುತ್ತಿದೆ.
ರಾಹುಲ್ ಗಾಂಧಿ, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಡಿಕೆ ಶಿವಕುಮಾರ್ ಜೊತೆ ಶಿವರಾಜ್ ಕುಮಾರ್ ಕೂಡಾ ಇಂದು ಸಮಾವೇಶದಲ್ಲಿ ವೇದಿಕೆ ಹಂಚಿಕೊಂಡರು. ಬಳಿಕ ಸಮಾವೇಶವನ್ನುದ್ದೇಶಿಸಿ ಪತ್ನಿ ಪರವಾಗಿ ಶಿವಣ್ಣ ಭಾಷಣ ಕೂಡಾ ಮಾಡಿದ್ದು, ಕಾಂಗ್ರೆಸ್ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.