Publish Date: Tue, 19 Sep 2023 (08:54 IST)
Updated Date: Tue, 19 Sep 2023 (09:55 IST)
ಹುಬ್ಬಳ್ಳಿ : ಇಲ್ಲಿನ ಈದ್ಗಾ ಮೈದಾನದಲ್ಲಿ ಇಂದು ಗಣೇಶ ಪ್ರತಿಷ್ಠಾಪನೆಗೆ ಸಿದ್ಧತೆ ನಡೆದಿದೆ. ಬೆಳಗ್ಗೆ 9.30ಕ್ಕೆ ನಗರದ ಮೂರು ಸಾವಿರ ಮಠದಿಂದ ವಿಜೃಂಭಣೆಯಿಂದ ಮೆರವಣಿಗೆ ಮೂಲಕ ಪ್ರತಿಷ್ಠಾಪನಾ ಗಣೇಶ ಮೂರ್ತಿ ಈದ್ಗಾ ಮೈದಾನಕ್ಕೆ ಕರೆಯಲಾಗುತ್ತದೆ.
ಬಳಿಕ ಹಿಂದೂ ಮುಖಂಡರ ಸಮ್ಮುಖದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಯಾಗಲಿದೆ. ನಂತರ ಹೋಮ, ಹವನ ಜೊತೆಗೆ ವಿಶೇಷ ಪೂಜೆ ಹಾಗೂ ಮಹಾಮಂಗಳಾರತಿ ನೆರವೇರಿಸಲಿದೆ. ತದನಂತರ ಸಾರ್ವಜನಿಕರ ದರ್ಶನಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.
ಶಾಂತಿಯುತವಾಗಿ ಹಬ್ಬ ಆಚರಣೆಗೆ ಪೊಲೀಸ್ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಕಳೆದ ಬಾರಿಯಂತೆ ಈ ಬಾರಿಯೂ ಕೂಡ ಮೈದಾನದಲ್ಲಿ ನಮಾಝ್ ಮಾಡುವ ಸ್ಥಳ ಹಾಗೂ ಮೂರ್ತಿ ಪ್ರತಿಷ್ಠಾಪನೆ ಸ್ಥಳದ ಮಧ್ಯೆ ಟೀನ್ ಶೀಟ್ ಹಾಕಿ ಅದರ ಮೇಲೆ ಪರದೆ ಕಟ್ಟಲಾಗಿದೆ.
ಮೈದಾನದಲ್ಲಿ ಸುತ್ತಲೂ ಸಿಸಿ ಕ್ಯಾಮೆರಾಗಳ ಕಣ್ಗಾವಲು ವ್ಯವಸ್ಥೆಯಿದೆ. ಮೈದಾನದಲ್ಲಿ ಪೊಲೀಸ್ ಕಂಟ್ರೋಲ್ ರೂಮ್ ಆರಂಭಿಸಲಾಗಿದೆ. ಖಾಕಿಪಡೆ ಫುಲ್ ಹೈಅಲರ್ಟ್ ಆಗಿದ್ದು, ಶಾಂತಿ ಭಂಗ ಆಗದಂತೆ ಎಚ್ಚರಿಕೆ ವಹಿಸಿದ್ದಾರೆ.
ಹಿಂದೂ ಸಂಘಟನೆಗಳು ಪ್ರತಿಷ್ಠಾಪನೆಗೂ ಮುನ್ನ ಮೈದಾನದಲ್ಲಿ ಪೂಜೆ ಜೊತೆಗೆ ಮೈದಾನ ಶುದ್ಧಿ ಪೂಜೆ ಮಾಡಿ ಮಂಟಪ ಸಿದ್ಧಪಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿವೆ. ಮೂರು ದಿನಗಳ ಕಾಲ ಧಾರ್ಮಿಕ ಕಾರ್ಯಕ್ರಮ ಜರುಗಲಿವೆ.. ರಾಜ್ಯದ ಹೆಸರಾಂತ ಸ್ವಾಮಿಗಳು, ಹಿಂದೂಪರ ಮುಖಂಡರು ಭೇಟಿ ನೀಡಲಿದ್ದಾರೆ.