Publish Date: Wed, 26 Sep 2018 (19:00 IST)
Updated Date: Wed, 26 Sep 2018 (19:04 IST)
ಬಿಜೆಪಿಯ ಹಾಲಿ ಶಾಸಕ ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಯೋಜನೆಗಳನ್ನು ಸ್ಥಗಿತಗೊಳಿಸಿದ್ದಾರೆ. ಪ್ರತಿ ಕಾಮಗಾರಿಯಲ್ಲಿ ಶೇ. 5ರಷ್ಟು ಕಮೀಷನ್ ನೀಡಬೇಕೆಂದು ಗುತ್ತಿಗೆದಾರರ ಮೇಲೆ ಒತ್ತಡವಿದೆ ಎಂದು ಕಾಂಗ್ರೆಸ್ ನ ಮಾಜಿ ಶಾಸಕ ಆರೋಪ ಮಾಡಿದ್ದಾರೆ.
ಕಲಬುರಗಿ ಜಿಲ್ಲೆಯ ಆಳಂದ ಮತಕ್ಷೇತ್ರದ ಬಿಜೆಪಿ ಶಾಸಕ ಸುಭಾಷ ಗುತ್ತೇದಾರ ವಿರುದ್ಧ ಕಾಂಗ್ರೆಸ್ ನ ಮಾಜಿ ಶಾಸಕ ಬಿ.ಆರ್.ಪಾಟೀಲ್ ವಾಗ್ದಾಳಿ ಮುಂದುವರಿಸಿದ್ದಾರೆ.
ಆಳಂದ ತಾಲೂಕಿನಲ್ಲಿ ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ 40 ಕೋಟಿ ರೂ. ಕಾಮಗಾರಿಗಳು ಸ್ಥಗಿತವಾಗಿದೆ. ಇದಕ್ಕೆ ಶಾಸಕರೇ ಹೊಣೆಯಾಗಿದ್ದಾರೆ. ಕಾಮಗಾರಿ ಮಾಡಬೇಕೆಂದರೆ ಶಾಸಕರಿಗೆ ಶೇ. 5ರಷ್ಟು ಕಮೀಷನ್ ನೀಡಬೇಕೆಂದು ಅಧಿಕಾರಿಗಳ ಮೇಲೆ ಒತ್ತಡವಿದೆ ಎಂದು ದೂರಿದರು.
ಯಾವೊಂದು ಕಾಮಗಾರಿಗಳು ಕ್ಷೇತ್ರದಲ್ಲಿ ಪ್ರಗತಿಯಲ್ಲಿ ಇಲ್ಲ ಎಂದಿರುವ ಅವರು, ಸೂಕ್ಷ್ಮವಾಗಿ ಪರಿಶೀಲಿಸಿ ಪ್ರಾದೇಶಿಕ ಆಯುಕ್ತರು ನಡೆಸಿದ ಸಭೆಯಲ್ಲಿ ಸುಳ್ಳು ಮಾಹಿತಿ ನೀಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಇಲ್ಲದಿದ್ದರೆ ಆಳಂದದಲ್ಲಿರುವ ಪಿಎಂಜಿಸಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುತ್ತದೆ ಎಂದು ಹೇಳಿದರು.