Publish Date: Tue, 28 Dec 2021 (20:27 IST)
Updated Date: Tue, 28 Dec 2021 (20:32 IST)
ಬೆಳ್ತಂಗಡಿ: ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ಸೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಪ್ರಯಾಣಿಕರೆಲ್ಲರೂ ಯಾವುದೇ ಅಪಾಯವಿಲ್ಲದೆ ಪಾರಾದ ಘಟನೆ ಬೆಳ್ತಂಗಡಿ ತಾಲೂಕಿನ ನಿಡ್ಲೆ ಸಮೀಪ ಕಳೆದ ರಾತ್ರಿ ಸಂಭವಿಸಿರುವುದು ವರದಿಯಾಗಿದೆ.
ಸುಗಮ ಹೆಸರಿನ ಖಾಸಗಿ ಬಸ್ ಕಾರ್ಕಳದಿಂದ ರಾತ್ರಿ ಬೆಂಗಳೂರಿಗೆ ಹೊಟಿತ್ತು. ಬಸ್ ನಿಡ್ಲೆ ಬಳಿ ತಲುಪಿದಾಗ ಬಸ್ಸಿನ ಮುಂಭಾಗದಲ್ಲಿರುವ ಇಂಜಿನ್ ಸಮೀಪ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಚಾಲಕ ತಕ್ಷಣವೇ ಬಸ್ಸನ್ನು ನಿಲ್ಲಿಸಿದ್ದು, ಪ್ರಯಾಣಿಕರನ್ನೆಲ್ಲ ಕೂಡಲೇ ಬಸ್ಸಿನಿಂದ ಕೆಳಗಿಳಿಸಿದ್ದಾರೆ.
ಈ ವೇಳೆ ವಿಷಯ ತಿಳಿದ ಸ್ಥಳೀಯರು ಸ್ಥಳಕ್ಕೆ ಧಾವಿಸಿದ್ದು ಬೆಂಕಿ ನಂದಿಸಲು ಸಹಕರಿಸಿದ್ದಾರೆ. ಅಷ್ಟರಲ್ಲಿ ಸ್ಥಳಕ್ಕೆ ಬೆಳ್ತಂಗಡಿ ಅಗ್ನಿಶಾಮಕ ದಳದ ಸಿಬ್ಬಂದಿ ಕೂಡಾ ಆಗಮಿಸಿದ್ದು, ಬೆಂಕಿಯನ್ನು ಸಂಪೂರ್ಣ ನಂದಿಸಿದ್ದಾರೆ.
ಬಸ್ಸಿನ ಇಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿರುವುದನ್ನು ಚಾಲಕ ಆರಂಭದಲ್ಲೇ ಗುರುರತಿಸಿ ಬಸ್ಸನ್ನು ನಿಲ್ಲಿಸಿದ್ದರಿಂದ ಯಾವುದೇ ಹೆಚ್ಚಿನ ಅಪಾಯವಿಲ್ಲದೆ ಬೆಂಕಿ ನಂದಿಸಲು ಸಾಧ್ಯವಾಗಿದೆ.