Publish Date: Fri, 06 Aug 2021 (12:08 IST)
Updated Date: Fri, 06 Aug 2021 (12:12 IST)
ಮೈಸೂರು(ಆ.06): ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿದ ಆರೋಪ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಹೌದು, ಮೈಸೂರು ವಿವಿ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ರಾಮಚಂದ್ರಪ್ಪ ಅವರು ನನ್ನ ಮೇಲೆ ಅತ್ಯಾಚಾರವಸಗಿದ್ದಾರೆ ಅಂತ ಸಂತ್ರಸ್ತೆ ನಿನ್ನೆಯಷ್ಟೇ ಪೊಲೀಸರಿಗೆ ದೂರು ಕೊಟ್ಟಿದ್ದಳು.
ಆದರೆ ಇಂದು ಪೊಲೀಸರ ವಿಚಾರಣೆ ವೇಳೆ ಸಂತ್ರಸ್ತೆ ಉಲ್ಟಾ ಹೊಡೆದಿದ್ದಾಳೆ. ನನ್ನ ಮೇಲೆ ಅತ್ಯಾಚಾರ ಆಗಿಲ್ಲ. ಅಂತಹ ಯಾವ ಘಟನೆಯೂ ನಡೆದಿಲ್ಲ. ಪ್ರೊ.ರಾಮಚಂದ್ರ ಅವರು ನನ್ನ ಪಿಎಚ್ಡಿ ಮಾರ್ಗದರ್ಶಕರಾಗಿದ್ದಾರೆ. ಸಂಶೋಧನೆಯ ಬಗ್ಗೆ ನಾವಿಬ್ಬರೂ ಮಾತನಾಡುತ್ತಿದ್ದೆವು. ಆಗ ಮನೆಗೆ ಬಂದ ರಾಮಚಂದ್ರ ಪತ್ನಿ ರಂಪ ಮಾಡಿದ್ದರು ಅಂತ ಹೇಳಿಕೆ ನೀಡಿದ್ದಾಳೆ.
ನನ್ನನ್ನು ಹೆದರಿಸಿ, ಬೆದರಿಸಿ ಬಲವಂತವಾಗಿ ದೂರು ಬರೆಸಿಕೊಂಡಿದ್ದಾರೆ. ಇದೀಗ ಪ್ರೊ.ರಾಮಚಂದ್ರ ಅವರ ಪತ್ನಿ ವಿರುದ್ಧವೇ ಸಂತ್ರಸ್ತೆ ದೂರು ನೀಡಿದ್ದಾರೆ. ಜಯಲಕ್ಷ್ಮಿಪುರಂ ಠಾಣೆಯ ಪೊಲೀಸರು ಎನ್ಸಿಆರ್ ದಾಖಲಿಸಿಕೊಂಡಿದ್ದಾರೆ.
ಮೈಸೂರು ವಿವಿ ಮಾನಸ ಗಂಗೋತ್ರಿಯಲ್ಲಿರುವ ಕ್ವಾಟ್ರಸ್ನಲ್ಲಿ ಸಂಶೋಧನಾ ವಿದ್ಯಾರ್ಥಿನಿಯ ಮೇಲೆ ಪ್ರಾಧ್ಯಾಪಕರೊಬ್ಬರು ಗುರುವಾರ ಮಧ್ಯಾಹ್ನ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿತ್ತು. ಸಂತ್ರಸ್ತ ಮಹಿಳೆಯ ಪರ ಪ್ರಾಧ್ಯಾಪಕನ ಪತ್ನಿಯೇ ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೇ ತಪ್ಪಿತಸ್ಥ ಪತಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದ್ದರು.