Publish Date: Sat, 11 Sep 2021 (12:16 IST)
Updated Date: Sat, 11 Sep 2021 (12:20 IST)
ಬೆಂಗಳೂರು : ಪರಿಸರ ನಾಶ ಇತ್ತೀಚೆಗೆ ಹೆಚ್ಚಾಗಿದ್ದು, ಇದನ್ನು ತಪ್ಪಿಸಲು ವಾರ್ಷಿಕ ಅಧ್ಯಯನದ ಅವಶ್ಯಕತೆ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ನಗರದ ಅರಣ್ಯ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅರಣ್ಯ ಹುತಾತ್ಮರ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮುಂದಿನ ಪೀಳಿಗೆಗಾಗಿ ಪರಿಸರ ನಷ್ಟ ತಪ್ಪಿಸಬೇಕಿದೆ. ಬಜೆಟ್ ನಲ್ಲಿ ಪರಿಸರ ಕೊರತೆ ನೀಗಿಸುವ ಯೋಜನೆ ತರಬೇಕು ಎಂದ ಅವರು, ಈ ನಿಟ್ಟಿನಲ್ಲಿ ಮುಂಬರುವ ಬಜೆಟ್ ನಲ್ಲಿ ಯೋಜನೆ ಜಾರಿಗೊಳಿಸಲಾಗುವುದು ಎಂದರು.
ಇದೇ ಮೊದಲ ಬಾರಿಗೆ ನಾವು ಪರಿಸರ ನಷ್ಟ ತಪ್ಪಿಸಲು ಯೋಜನೆ ತರುತ್ತಿದ್ದು, ಇದರಿಂದ ನಷ್ಟ ತಕ್ಕಮಟ್ಟಿಗೆ ತಗ್ಗಿಸಬಹುದು ಎಂದು ಅಭಿಪ್ರಾಯಪಟ್ಟರು.
ರಾಜ್ಯದಲ್ಲಿ ರಾಷ್ಟ್ರೀಯ ಪ್ರಮಾಣಕ್ಕಿಂತ ಶೇ. 10ರಷ್ಟು ಅರಣ್ಯ ಪ್ರದೇಶದ ಕೊರತೆ ಇದೆ ಎಂದು ಬೇಸರ ವ್ಯಕ್ತಪಡಿಸಿದರು.