Publish Date: Mon, 13 Feb 2023 (16:29 IST)
Updated Date: Mon, 13 Feb 2023 (17:31 IST)
ಬೆಂಗಳೂರು : ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಬೇಸಿಗೆಯಲ್ಲಿ ರೈತರ ಪಂಪ್ ಸೆಟ್ಗಳಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ.
ಬೇಸಿಗೆ ವಿದ್ಯುತ್ ಬೇಡಿಕೆ ಪೂರೈಕೆಗೆ ಸರ್ಕಾರ ಸಿದ್ಧವಿದೆ ಎಂದು ಇಂಧನ ಸಚಿವ ಸುನಿಲ್ ಕುಮಾರ್ ತಿಳಿಸಿದ್ದಾರೆ. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದದಲ್ಲಿ ಬಿಜೆಪಿ ಸದಸ್ಯ ರುದ್ರೇಗೌಡ ಪ್ರಶ್ನೆಗೆ ಉತ್ತರಿಸಿದ ಸಚಿವರು, ಫೆಬ್ರವರಿಯಲ್ಲಿಯೇ ನಾವು ವಿದ್ಯುತ್ ಬಳಕೆಯಲ್ಲಿ 15,016 ಮೆಗಾವ್ಯಾಟ್ ತಲುಪಿದ್ದೇವೆ. ಬೇಸಿಗೆಯಲ್ಲಿ 15.5 ಸಾವಿರ ಮೆಗಾವ್ಯಾಟ್ ತಲುಪಲಿದ್ದೇವೆ.
ದೊಡ್ಡ ಪ್ರಮಾಣದಲ್ಲಿ ಸೋಲಾರ್ ರೂಫ್ ಟಾಪ್ಗೆ ಅನುಕೂಲ ಮಾಡಲಾಗುತ್ತಿದೆ. 14,800 ಮೆಗಾವ್ಯಾಟ್ ಕಳೆದ ಬಾರಿ ಬೇಡಿಕೆ ಬಂದರೂ ಸರಬರಾಜು ಮಾಡಿದ್ದೇವೆ. ಈ ಬಾರಿಯ ಏಪ್ರಿಲ್, ಮೇನಲ್ಲಿ ತೊಂದರೆ ಆಗದಂತೆ ಕ್ರಮ ವಹಿಸಲಾಗುತ್ತದೆ ಎಂದರು.
ಈ ವೇಳೆ ಬಿಜೆಪಿ ಸದಸ್ಯ ಲಕ್ಷ್ಮಣ ಸವದಿ ಮಾತನಾಡಿ, ಈಗ ಪರೀಕ್ಷೆ ಸಮಯ. ವಿದ್ಯಾರ್ಥಿಗಳಿಗೆ ಓದಲು ಸಮಸ್ಯೆ ಆಗುತ್ತದೆ. ಹಳ್ಳಿ ಭಾಗದಲ್ಲಿ ಆಗಾಗ ವಿದ್ಯುತ್ ಹೋದರೆ ಮಕ್ಕಳಿಗೆ ಓದಲು ತೊಂದರೆ ಆಗುತ್ತದೆ. ಹೀಗಾಗಿ ಗ್ರಾಮೀಣ ಭಾಗದಲ್ಲಿ ನಿರಂತರವಾಗಿ ಒಂದು ಫೇಸ್ ಕರೆಂಟ್ ನೀಡಬೇಕು ಎಂದು ಒತ್ತಾಯ ಮಾಡಿದರು.