Select Your Language

Notifications

webdunia
webdunia
webdunia
webdunia

ಲೂಟಿಕೋರ ರಾಜ್ಯ ಸರಕಾರದ ವಿರುದ್ಧ ಜನರು ಬೀದಿಗಿಳಿದಾರು: ಡಿ.ವಿ.ಸದಾನಂದಗೌಡ

DV Sadananda Gowda

Krishnaveni K

ಬೆಂಗಳೂರು , ಶನಿವಾರ, 31 ಮೇ 2025 (17:13 IST)
ಬೆಂಗಳೂರು: ಕಾಂಗ್ರೆಸ್ಸಿನ ಲೂಟಿಕೋರ ರಾಜ್ಯ ಸರಕಾರದ ವಿರುದ್ಧ ಜನರು ಶೀಘ್ರವೇ ಬೀದಿಗಿಳಿಯುವ ದಿನ ಬರಲಿದೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ಎಚ್ಚರಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು ಪ್ರಶ್ನೆಗೆ ಉತ್ತರ ನೀಡಿದರು. ಮತದಾನಕ್ಕೆ ಇನ್ನೂ 2-3 ವರ್ಷ ಅಧಿಕಾರ ಇದೆ ಎಂದು ಅವರು ತಿಳಿದುಕೊಂಡಿರಬಹುದು. ಅಷ್ಟರೊಳಗೆ ಎಲ್ಲ ಮಾಡಿಕೊಳ್ಳುತ್ತೇವೆ ಎಂದು ಅವರು ಭಾವಿಸಿರಬಹುದು. ಆದರೆ, ಜನರು ಬೀದಿಗೆ ಇಳಿದರೆ ಇವರ ಯಾವ ಸಚಿವರೂ ಯಾವ ಊರಿಗೂ ಹೋಗದಂತೆ ಆಗಲಿದೆ. ಮುಖ್ಯಮಂತ್ರಿಯು ವಿಧಾನಸೌಧ ಇಲ್ಲವೇ ಅವರ ಮನೆಯಲ್ಲಿ ಕುಳಿತಿರಬೇಕಾದ ಪರಿಸ್ಥಿತಿ ಬಂದೀತು ಎಂದು ತಿಳಿಸಿದರು.

ಮಹಿಳೆಗೆ 2-3 ತಿಂಗಳ ಹಣ ಬಂದಿಲ್ಲ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರ ಬಳಿ ಬರುತ್ತಾರೆ. 3 ತಿಂಗಳ ಹಣದಲ್ಲಿ 1 ತಿಂಗಳದ್ದು ಕೊಟ್ಟಲ್ಲಿ ಮೊತ್ತ ಕೊಡಿಸುವುದಾಗಿ ಲೂಟಿ ಹೊಡೆಯುವ ಪ್ರವೃತ್ತಿಗೆ ಪ್ರೇರಣೆ ಕೊಡುವ ಕೆಲಸ ಕಾರ್ಯ ಅನುಷ್ಠಾನ ಸಮಿತಿ ಮೂಲಕ ಆಗುತ್ತಿದೆ ಎಂದು ಟೀಕಿಸಿದರು.
ಅನುಷ್ಠಾನ ಸಮಿತಿ ಯಾಕೆ ಬೇಕು? ಸರಕಾರಿ ಅಧಿಕಾರಿಗಳು ಇರುವುದು ಯಾಕೆ? ಸರಕಾರಿ ಯೋಜನೆ ಅನುಷ್ಠಾನಕ್ಕೆ ಲೂಟಿಕೋರರನ್ನು ತಯಾರು ಮಾಡುವ ಅವಶ್ಯಕತೆ ಇಲ್ಲ. ಮಂತ್ರಿಗಳು ಯಾಕೆ ಇದ್ದಾರೆ ಎಂದು ಕೇಳಿದರು. ಅಧಿಕಾರಿಗಳನ್ನೂ ಮೇಯಲು ಬಿಟ್ಟಿದ್ದಾರೆ. ಅಧಿಕಾರಿಗಳಿಗೆ ನೀನು ಇಷ್ಟು ಕೊಟ್ಟಲ್ಲಿ ಇಂಥ ಜಾಗ ಎಂದು ನಿಗದಿಪಡಿಸುತ್ತಾರೆ ಎಂದು ದೂರಿದರು.
 
ಇದು ಆಲಿಬಾಬಾ ಮತ್ತು 40 ಕಳ್ಳರ ಮಾದರಿ. ಸಿದ್ದರಾಮಯ್ಯ ಮತ್ತು 4 ಸಾವಿರ ಕಳ್ಳರು ಎಂಬಂತೆ ತಯಾರು ಮಾಡುವ ಕಾರ್ಯ ಕರ್ನಾಟಕದಲ್ಲಿ ನಡೆಯುತ್ತಿದೆ. ಇದು ದುರದೃಷ್ಟಕರ ಎಂದು ಆಕ್ಷೇಪಿಸಿದರು. ಇಂಥ ಭ್ರಷ್ಟ, ಲಜ್ಜೆಗೆಟ್ಟ, ನೀತಿಗೆಟ್ಟ ಸರಕಾರ, ಜನರ ಕಿಸೆಯಿಂದ, ಪ್ರತಿ ವ್ಯಕ್ತಿಯ ಕಿಸೆಯಿಂದ ದುಡ್ಡು, ಲಂಚ ಪಡೆಯುವ ರೀತಿಯಲ್ಲಿ ಕ್ರೋಡೀಕರಿಸುವುದು ನಾನು ಯಾವತ್ತೂ ಕಂಡಿಲ್ಲ ಎಂದು ತಿಳಿಸಿದರು.
 
ಕಾಂಗ್ರೆಸ್ ಸರಕಾರದ ಗ್ಯಾರಂಟಿಗಳು ಜನರಿಗಾಗಿ ಅಲ್ಲ; ರಾಜ್ಯ ಸರಕಾರದ ಹಿತಾಸಕ್ತಿಗಾಗಿ ಅಲ್ಲ; ಅದು ಇರುವುದೇ ಅವರ ಸ್ವಂತ ಚೇಲಾಗಳಿಗಾಗಿ. ನಾವು ಖಜಾನೆ ಲೂಟಿ ಮಾಡುತ್ತಿದ್ದೇವೆ. ನೀವೂ ಸ್ವಲ್ಪ ತಿನ್ನಿ ಎಂಬಂತಿದೆ ಎಂದು ಆರೋಪ ವ್ಯಕ್ತಪಡಿಸಿದರು. ಇದೊಂದು ಅತ್ಯಂತ ಕೆಟ್ಟ ಸಂಪ್ರದಾಯ ಎಂದು ದೂರಿದರು. 48 ಅವಶ್ಯಕ ವಸ್ತುಗಳ ಮೇಲಿನ ದರ ಏರಿಕೆಯನ್ನೂ ಅವರು ಟೀಕಿಸಿದರು.
 
ಓಲೈಕೆ ರಾಜಕಾರಣ ಅಭಿವೃದ್ಧಿಗೆ ಪೂರಕವಲ್ಲ

ಕಾಂಗ್ರೆಸ್ಸಿನ ತುಷ್ಟೀಕರಣ ನೀತಿಯಿಂದ ಹಿಂದೂಗಳು ದ್ವಿತೀಯ ದರ್ಜೆ ನಾಗರಿಕರಾಗಿದ್ದಾರೆ. ಅಲ್ಪಸಂಖ್ಯಾತರೇ ಇವತ್ತು ಪ್ರಥಮ ದರ್ಜೆ ನಾಗರಿಕರು ಎಂದು ಪ್ರಶ್ನೆಗೆ ಉತ್ತರ ಕೊಟ್ಟರು. ಓಲೈಕೆ ರಾಜಕಾರಣವು ಅಭಿವೃದ್ಧಿಗೆ ಪೂರಕವಲ್ಲ ಎಂದು ನುಡಿದರು. ನಾವೇನು ಮಾಡಿದರೂ ನಡೆಯುತ್ತದೆ; ನಮ್ಮನ್ನು ಬೆಂಬಲಿಸುವ ರಾಜ್ಯ ಸರಕಾರ ಇದೆ ಎಂಬ ಭಾವನೆ ಅಲ್ಪಸಂಖ್ಯಾತರಲ್ಲಿದೆ ಎಂದು ಹೇಳಿದರು.
ಕೇಂದ್ರ ಸರಕಾರದ ಜನೌಷಧಿ ಕೇಂದ್ರಗಳಿಂದ 100 ರೂಪಾಯಿಗೆ ಸಿಗುವ ಔಷಧಿಗಳು 15-25 ರೂಪಾಯಿಗೆ ಸಿಗುವಂತಾಗಿತ್ತು. ಅದನ್ನೂ ಈ ಕಾಂಗ್ರೆಸ್ಸಿಗರು ನಿಲ್ಲಿಸುತ್ತಿದ್ದಾರೆ ಎಂದು ಟೀಕಿಸಿದರು.

ಸರಕಾರ ಪ್ರಕಟಿಸಿದ ಯಾವುದೇ ಯೋಜನೆಯನ್ನು ಪಡೆದುಕೊಳ್ಳುವ ಹಕ್ಕು ಪ್ರತಿಯೊಬ್ಬನಿಗೂ ಇದೆ. ಯೋಜನೆ ಮಾಡುವಾಗ ಇವರು ದಕ್ಷಿಣ ಕನ್ನಡವನ್ನು ಹೊರತುಪಡಿಸಿ ಎಂದು ತಿಳಿಸಬೇಕಿತ್ತು ಎಂದು ಪ್ರಶ್ನೆಗೆ ಉತ್ತರ ಕೊಟ್ಟರು. ಇವರು ಹಿಂದೆ ಕಾಶ್ಮೀರ ಪ್ರತ್ಯೇಕ ಎಂದು ಮಾಡಿದ್ದರಲ್ಲವೇ? ದಕ್ಷಿಣ ಕನ್ನಡವನ್ನು ಬೇರೆ ಮಾಡಿ ನೋಡಲಿ; ಆಗ ಇವರಿಗೆ ಗೊತ್ತಾಗಲಿದೆ ಎಂದು ತಿಳಿಸಿದರು.

ದಕ್ಷಿಣ ಕನ್ನಡ, ಉಡುಪಿ ಭಾಗದ ಜನರು ಭ್ರಷ್ಟಾಚಾರಕ್ಕೆ ದೂರ ಇರುವವರು. ಅವರ ಕೆಲಸ ಆಯ್ತು ತಾವಾಯ್ತು ಎಂಬಂತಿರುವ ಸಜ್ಜನರು. ಯಾರಿಗೂ ಕಮಿಷನ್ ಕೊಡುವುದಿಲ್ಲ; ಕಾಂಗ್ರೆಸ್ಸಿನವರಿಗೆ ಅಲ್ಲಿಂದ ಕಲೆಕ್ಷನ್ ಸಿಗುತ್ತಿಲ್ಲ. ಅನುಷ್ಠಾನ ಸಮಿತಿ ರಚಿಸಿ ದಕ್ಷಿಣ ಕನ್ನಡದಲ್ಲೂ ಲೂಟಿ ಹೊಡೆಯಲು ಅವಕಾಶ ಕೊಡುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿದರು.
 
 
 

Share this Story:

Follow Webdunia kannada

ಮುಂದಿನ ಸುದ್ದಿ

Operation Sindoor: ಇಲ್ಲೇ ಹುಟ್ಟಿ, ತಿಂದು ಬೆಳೆದವರಿಗೆ ಅದೆಂತಹ ಪೊಗರು, ಇದಕ್ಕೆ ಈ ಪ್ರಕರಣವೇ ಸಾಕ್ಷಿ