Select Your Language

Notifications

webdunia
webdunia
webdunia
webdunia

ಯಾರಿಗೆ ದೂರು ಕೊಟ್ರೂ ಕ್ರಮವೇ ತಗೊಳ್ಳಲ್ಲ: ಛಲವಾದಿ ನಾರಾಯಣಸ್ವಾಮಿ ಅಳಲು

Chalavadi Narayanaswamy

Krishnaveni K

ಬೆಂಗಳೂರು , ಗುರುವಾರ, 29 ಮೇ 2025 (17:23 IST)
ಬೆಂಗಳೂರು: ಚಿತ್ತಾಪುರದಲ್ಲಿ ನನ್ನ ದಿಗ್ಬಂಧನ, ಅಹಿತಕರ ಘಟನೆಗಳ ಕುರಿತು ಡಿ.ಜಿ, ಗೃಹ ಸಚಿವ, ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿಗೆ ದೂರು ಕೊಟ್ಟಿದ್ದೇವೆ. ಇದುವರೆಗೂ ಏನೂ ಕ್ರಮ ಜರುಗಿಸಿಲ್ಲ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಕ್ಷೇಪಿಸಿದ್ದಾರೆ.
 
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಚಿತ್ತಾಪುರದಲ್ಲಿ 5 ಗಂಟೆ ನನ್ನನ್ನು ಕೂಡಿ ಹಾಕಿದ್ದರು. ನಮ್ಮ ಜನರು ಬರದಂತೆ ತಡೆದರು. ನನ್ನ ಕಾರಿನ ಮೇಲೆ ಮಸಿ ಸುರಿದರು. ಕಲ್ಲುಗಳನ್ನು ಜಮಾಯಿಸಿ ಇಟ್ಟಿದ್ದರು. ಮೊಟ್ಟೆ ತೂರಲು, ಕಲ್ಲು ತೂರಾಟಕ್ಕೆ ಸಿದ್ಧತೆ ಮಾಡಿಕೊಂಡಿದ್ದರು ಎಂದು ಗಮನಕ್ಕೆ ತಂದರು. ನಾನು ಅಲ್ಲಿಂದಲೇ ಗೃಹ ಸಚಿವರು, ಎಡಿಜಿಪಿಗೆ ಕರೆ ಮಾಡಿ ಮಾತನಾಡಿದೆ. ಸುಮಾರು 10 ಸಾರಿ ಎಸ್ಪಿಗೆ ಮಾತನಾಡಿದ್ದೆ ಎಂದು ವಿವರಿಸಿದರು.

ಅಡಿಷನಲ್ ಎಸ್ಪಿ ಬಂದವರು 5 ತಾಸು ನಮ್ಮ ಜೊತೆಗಿದ್ದರು. ಆದರೆ, ನನ್ನನ್ನು ನಿಂದಿಸುವವರ ವಿರುದ್ಧ ಕ್ರಮ ಕೈಗೊಂಡಿಲ್ಲ; ಕೇಳಿದರೆ ‘ಸಾರ್ ಅರ್ಥ ಮಾಡ್ಕೊಳ್ಳಿ; ನಮಗೆ ಒತ್ತಡ ಇದೆ’ ಎನ್ನುತ್ತಿದ್ದರು. 5 ಗಂಟೆ ಬಳಿಕ ಚಿತ್ತಾಪುರದಿಂದ ಹೊರಗೆ ಹಾಕಿದರು. ನಾನು ಯಾದಗಿರಿಗೆ ಬಂದೆ. ಕಾರ್ಯಕ್ರಮಗಳನ್ನು ರದ್ದುಪಡಿಸಿ ರಾತ್ರೋರಾತ್ರಿ ರೈಲಿನಲ್ಲಿ ಬೆಂಗಳೂರಿಗೆ ಬಂದೆ ಎಂದು ಹೇಳಿದರು. ಬಳಿಕ ಗುಲ್ಬರ್ಗದಲ್ಲಿ ಗುಲ್ಬರ್ಗ ಚಲೋ ಪ್ರತಿಭಟನೆ ನಡೆದುದನ್ನೂ ಪ್ರಸ್ತಾಪಿಸಿದರು.

ಚಿತ್ತಾಪುರಕ್ಕೆ ನನ್ನನ್ನು ನೋಡಲು ಬಂದಿದ್ದ ನಮ್ಮ ಪಕ್ಷದ ಮುಖಂಡ ಅಂಬಾರಾಯ ಅಷ್ಟಗಿಯವವರ ಮೇಲೆ ಹಲ್ಲೆ ಮಾಡಿದ್ದಾರೆ. ಬಟ್ಟೆ ಹರಿದು ಬಿಸಾಡಿದ್ದರು. ಅವರ ಮೇಲೇ ದೂರು ಕೊಡಿಸಿ ತಹಸೀಲ್ ಕಚೇರಿಯಲ್ಲಿ ಕೂಡಿ ಹಾಕಿದ್ದರು. ಇದಕ್ಕಾಗಿಯೇ ನಾವು ರಿಪಬ್ಲಿಕ್ ಆಫ್ ಗುಲ್ಬರ್ಗ ಎಂದಿದ್ದಾಗಿ ಹೇಳಿದರು.
 
ನಮ್ಮ ಸರಕಾರ ಇದ್ದಾಗ ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯನವರು ಕೊಡಗಿಗೆ ಭೇಟಿ ಕೊಟ್ಟಿದ್ದರು. ಮೊಟ್ಟೆ ಎಸೆದರೆಂದು ದೊಡ್ಡ ರಾದ್ಧಾಂತ ಮಾಡಿದ್ದರು. ನಾವು ಅವರಿಗೆ ಎಷ್ಟು ರಕ್ಷಣೆ ಕೊಟ್ಟಿದ್ದೆವು ಎಂದು ಗಮನ ಸೆಳೆದರು. 
 
ಪ್ರಶಸ್ತಿ ಋಣ ತೀರಿಸಲು ದೂರು
ದತ್ತಾತ್ರೇಯ ಶಾಂತಪ್ಪ ಇಕ್ಕಲಗಿ ಎಂಬವರು ವಿಧಾನಪರಿಷತ್ ವಿಪಕ್ಷದ ಮುಖ್ಯ ಸಚೇತಕ ರವಿಕುಮಾರರ ವಿರುದ್ಧ ದೂರು ನೀಡಿದ್ದಾರೆ. ಅವರು ಸಮಾಜಸೇವಕ. ಅವರಿಗೆ ಕಾಂಗ್ರೆಸ್ ಸರಕಾರವು ಈಚೆಗೆ ಅಂಬೇಡ್ಕರರ ಪ್ರಶಸ್ತಿ ಕೊಟ್ಟಿದೆ. ಪ್ರಶಸ್ತಿ ಋಣ ತೀರಿಸಲು ಅವರು ದೂರು ಕೊಟ್ಟಿದ್ದಾರೆ ಎಂದು ಆರೋಪಿಸಿದರು. ದತ್ತಾತ್ರೇಯರನ್ನು ಯಾರಾದರೂ ಬೈದರೇ? ರವಿಕುಮಾರರಿಗೆ ಪೊಲೀಸ್ ನೋಟಿಸ್ ಕೊಡುತ್ತೀರಾ? ಈ ಸರಕಾರದಲ್ಲಿ ಏನು ನಡೆದಿದೆ ಎಂದು ಕೇಳಿದರು.

ಡಿ.ಸಿ, ಖರ್ಗೆಯವರು, ಅಧಿಕಾರಿಗಳನ್ನು ರವಿಕುಮಾರ್ ಅವರು ಬೈದಿದ್ದಾರೆ. ಅದಕ್ಕಾಗಿ ದೌರ್ಜನ್ಯ ಕಾಯ್ದೆಯಡಿ ಹೊಲೆಯ ಪದ ಬಳಸಿದ್ದಾಗಿ ಆಕ್ಷೇಪಿಸಿ ದೂರು ಕೊಟ್ಟಿದ್ದಾರೆ ಎಂದು ಟೀಕಿಸಿದರು. ನಾನು ಕೂಡ ಎಸ್.ಸಿ. ಸಮುದಾಯಕ್ಕೆ ಸೇರಿದವ. ಡಿ.ಸಿ.ಯವರನ್ನು ಪಾಕಿಸ್ತಾನದವರು ಎಂದರಲ್ಲ. ಇದು ಅಟ್ರಾಸಿಟಿ ಕೇಸಿಗೆ ಕಾರಣವಾಗುತ್ತದೆಯೇ ಎಂದು ಪ್ರಶ್ನಿಸಿದರು. ಮಲ್ಲಿಕಾರ್ಜುನ ಖರ್ಗೆಯವರು ಎಐಸಿಸಿ ಅಧ್ಯಕ್ಷರು ಎನ್ನುವುದು ಅಟ್ರಾಸಿಟಿ ಆಗುವುದೇ ಎಂದು ಕೇಳಿದರು.

ವಿಧಾನಪರಿಷತ್ ವಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಅವರು ಹೊಲೆಯ, ದಲಿತ ಎಂಬ ಪದಗಳನ್ನು ತಮ್ಮ ಭಾಷಣದ ವೇಳೆ ಬಳಸಿದ್ದರೆ ನಾನೇ ಅವರ ಮೇಲೆ ದೂರು ನೀಡುತ್ತೇನೆ ಎಂದು ಸವಾಲೆಸೆದರು.
 

Share this Story:

Follow Webdunia kannada

ಮುಂದಿನ ಸುದ್ದಿ

ಪಹಲ್ಗಾಮ್‌ ದಾಳಿಯ ಮಾಸ್ಟರ್‌ ಮೈಂಡ್‌ಗೆ ಪಾಕಿಸ್ತಾನದಲ್ಲಿ ಎಷ್ಟು ಗೌರವ ಕೊಡ್ತಾರೆ