Publish Date: Wed, 10 Jan 2024 (16:00 IST)
Updated Date: Wed, 10 Jan 2024 (17:45 IST)
ಉತ್ತರಪ್ರದೇಶ: ಶ್ರೀರಾಮಚಂದ್ರ ಮೂರ್ತಿಯ ಪ್ರತಿಷ್ಠಾಪನಾ ಕಾರ್ಯವನ್ನು ರಾಷ್ಟ್ರೀಯ ಉತ್ಸವ ಎಂದು ಘೋಷಿಸಿರುವ ಸಿಎಂ ಯೋಗಿ ಆದಿತ್ಯನಾಥ್ ಅಂದು ಶಾಲಾಕಾಲೇಜುಗಳು ಸೇರಿದಂತೆ ರಾಜ್ಯದ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿದ್ದಾರೆ. ಜೊತೆಗೆ ಅಯೋಧ್ಯೆಯಲ್ಲಿ ಜ. 22 ರಂದು ಶ್ರೀರಾಮಮಂದಿರದ ಪ್ರತಿಷ್ಠಾಪನಾ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಂದು ರಾಜ್ಯಾದ್ಯಂತ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದೆ.
ಪ್ರತಿಷ್ಠಾಪನಾ ಕಾರ್ಯಕ್ರಮದ ಸಿದ್ದತೆಗಳನ್ನು ಸಿಎಂ ಯೋಗಿ ಆದಿತ್ಯನಾಥ್ ಪರಿಶೀಲಿಸಿದರು. ರಾಮಲಲ್ಲಾಗೆ ಪ್ರಾರ್ಥನೆ ಸಲ್ಲಿಸಿದ ಯೋಗಿ ಆದಿತ್ಯನಾಥ್, ಬಳಿಕ ಹನುಮಾನ್ ಗರಿ ದೇಗುಲಕ್ಕೂ ಸಹ ಭೇಟಿ ನೀಡಿದರು.
ರಾಮಜನ್ಮಭೂಮಿ ಟ್ರಸ್ಟ್ ನೊಡನೆ ಸಭೆ ನಡೆಸಿದ ಬಳಿಕ ಸಿಎಂ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿ, ದೇಗುಲದಲ್ಲಿ ನಡೆಯಲಿರುವ ವೇದೋಕ್ತ ಪೂಜಾವಿಧಾನದ ಬಗ್ಗೆ ಮಕರ ಸಂಕ್ರಾಂತಿಯ ಬಳಿಕ ರೂಪುರೇಷೆಗಳನ್ನು ರಚಿಸುವುದಾಗಿ ಹೇಳಿದ್ದಾರೆ.