ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಕುಡಿಯುವ ನೀರಿಗೆ ಯಾವುದೇ ಕೊರತೆಯಿಲ್ಲ ಮತ್ತು ನೀರಾವರಿ ಅಗತ್ಯಗಳನ್ನು ಸರ್ಕಾರವು ಪರಿಣಾಮಕಾರಿಯಾಗಿ ನಿರ್ವಹಿಸುತ್ತಿದೆ ಎಂದು ಜಲಸಂಪನ್ಮೂಲ ಸಚಿವರೂ ಆಗಿರಿವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬುಧವಾರ ಹೇಳಿದ್ದಾರೆ.
ಕುಡಿಯುವ ನೀರಿಗೆ ರಾಜ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ. ನಮಗೆ ಸಾಕಷ್ಟು ಕುಡಿಯುವ ನೀರು ಇದೆ ಮತ್ತು ನಾವು ನೀರಾವರಿ ಅಗತ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತಿದ್ದೇವೆ ಎಂದು ಶಿವಕುಮಾರ್ ಮಾಹಿತಿ ನೀಡಿದ್ದಾರೆ.
ಉದಯಪುರದಲ್ಲಿ ನಡೆದ ಎರಡನೇ ಅಖಿಲ ಭಾರತ ಜಲಸಂಪನ್ಮೂಲ ಸಚಿವರ ಸಮ್ಮೇಳನದಲ್ಲಿ ಕರ್ನಾಟಕಕ್ಕೆ ಸಂಬಂಧಿಸಿದ ಹಲವು ಪ್ರಮುಖ ವಿಷಯಗಳ ಕುರಿತು ಚರ್ಚಿಸಲಾಗಿದೆ ಎಂದು ಅವರು ತಿಳಿಸಿದರು.
ಚರ್ಚೆಯಲ್ಲಿ ತುಂಗಭದ್ರಾ ನದಿ ಸಮಸ್ಯೆ ಬಗೆಹರಿಸಿ ಪರ್ಯಾಯ ಅಣೆಕಟ್ಟು ನಿರ್ಮಿಸುವ ಇಚ್ಛೆ ವ್ಯಕ್ತಪಡಿಸಿದ್ದೆವು. ಸಂಬಂಧಪಟ್ಟ ಸಚಿವರು ಆಂಧ್ರಪ್ರದೇಶ ಮತ್ತು ತೆಲಂಗಾಣದೊಂದಿಗೆ ಸಭೆ ನಡೆಸಿದ್ದಾರೆ. ನಾನೇ ಖುದ್ದಾಗಿ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರೊಂದಿಗೆ ಮಾತನಾಡಿದ್ದು, ನೀರು ಸಂಗ್ರಹಣೆಗೆ ತೀವ್ರ ತೊಂದರೆಯಾಗುತ್ತಿರುವ ಹೂಳು ತೆಗೆಯುವ ಅಗತ್ಯವನ್ನು ನಾವು ಒತ್ತಿ ಹೇಳಿದ್ದೇವೆ ಎಂದರು.
ಮೇಕೆದಾಟು ಅಣೆಕಟ್ಟು ಯೋಜನೆ ಕುರಿತು ಅವರು ಮಾತನಾಡಿದರು. ಕೇಂದ್ರ ಸರ್ಕಾರ ತನ್ನ ಅಭಿಪ್ರಾಯವನ್ನು ನೀಡಬೇಕಾಗಿರುವುದರಿಂದ ಈ ಯೋಜನೆಯಿಂದ ತಮಿಳುನಾಡು ಮತ್ತು ಕರ್ನಾಟಕ ಎರಡಕ್ಕೂ ಲಾಭವಾಗುವುದು ಅತ್ಯಗತ್ಯ. ನಾವು ರಾಜಕೀಯ ವಿರೋಧಿಗಳಾಗಿದ್ದರೂ ಮೇಕೆದಾಟು ಯೋಜನೆ ಎರಡೂ ರಾಜ್ಯಗಳಿಗೆ ಅನುಕೂಲವಾಗಬೇಕು ಎಂದು ಪ್ರತಿಪಾದಿಸಿದರು.
ಕೃಷ್ಣಾ ನದಿಯ ಆಲಮಟ್ಟಿ ಅಣೆಕಟ್ಟಿನ ಬಗ್ಗೆಯೂ ನಾವು ಚರ್ಚಿಸಿದ್ದೇವೆ, ಅದಕ್ಕೆ ಗೆಜೆಟ್ ಅಧಿಸೂಚನೆ ಬಾಕಿ ಇದೆ, ನಾವು ಈಗಾಗಲೇ ಸಂಬಂಧಿತ ಕೆಲಸವನ್ನು ಪ್ರಾರಂಭಿಸಿದ್ದೇವೆ, ಅದನ್ನು ಹಂತಗಳಲ್ಲಿ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.