ಬೆಂಗಳೂರು: ಅಜೀರ್ಣ, ಗ್ರಾಸ್ಟ್ರಿಕ್ ಹಾಗೂ ಲೋ ಶುಗರ್ ಸಮಸ್ಯೆಯಿಂದ ಬಳಲುತ್ತಿದ್ದ ವೈದ್ಯೆ ಪತ್ನಿಯನ್ನು ಇಂಜೆಕ್ಷನ್ ನೀಡಿ ಕೊಂದು ಸಹಜ ಸಾವು ಎಂದು ಬಿಂಬಿಸಿ ಕುಟುಂಬಸ್ಥರನ್ನು ನಂಬಿಸಿದ್ದ ಖತರ್ನಾಕ್ ವೈದ್ಯ ಪತಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಈ ಘಟನೆ ಇದೀಗ ರಾಜ್ಯ ರಾಜಧಾನಿಯನ್ನೇ ಬೆಚ್ಚಿ ಬೀಳಿಸಿದ್ದು, ಪತ್ನಿಯನ್ನು ಕೊಂದು, ಅದನ್ನು ಸಹಜ ಸಾವೆಂದು ಬಿಂಬಿಸಲು ಹೊರಟು ಪಾಪಿ ವೈದ್ಯ ಗಂಡನ ಭೀಕರ ಕೃತ್ಯ ಎಫ್ಎಸ್ಎಲ್ ವರದಿಯಿಂದ ಬಯಲಾಗಿದೆ.
ಈ ಭೀಕರ ಘಟನೆ ಬೆಂಗಳೂರಿನ ಮಾರತ್ ಹಳ್ಳಿಯಲ್ಲಿ ನಡೆದಿದೆ. ಡಾ.ಕೃತಿಕಾ ಎಂಬ ಮಹಿಳೆಯನ್ನು ಡಾಕ್ಟರ್ ಆಗಿರುವ ಪತಿ ಮಹೇಂದ್ರ ಎಂಬಾತ ಕೊಲೆ ಮಾಡಿ, ಇದೀಗ ಪೊಲೀಸ್ ಅತಿಥಿಯಾಗಿದ್ದಾನೆ.
ಪತ್ನಿಗೆ ಅನಾರೋಗ್ಯ ಸಮಸ್ಯೆ ಇರುವ ಕಾರಣ ಈತ ಕೊಲೆ ಮಾಡಿದ್ದಾನೆ ಎಂಬ ಆಘಾತಕಾರಿ ವಿಷಯ ತನಿಖೆ ವೇಳೆ ಬಯಲಾಗಿದೆ.
ಪ್ರಕರಣದ ಹಿನ್ನೆಲೆ: 2024ರ ಮೇ 26ರಂದು ಡಾ.ಮಹೇಂದ್ರರೆಡ್ಡಿ ಮತ್ತು ಡಾ.ಕೃತಿಕಾರೆಡ್ಡಿ ವಿವಾಹವಾಗಿತ್ತು. ಇವರಿಬ್ಬರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದರು. ಇನ್ನೂ ಕೃತಿಕಾ ಚರ್ಮರೋಗ ತಜ್ಞೆಯಾಗಿದ್ದರು. ಅವರಿಗೆ ಈಚೆಗೆ ಚರ್ಮರೋಗ, ಅಜೀರ್ಣ, ಗ್ಯಾಸ್ಟ್ರಿಕ್, ಲೋಶುಗರ್ ಸಮಸ್ಯೆಯಿಂದ ಬಳಲುತ್ತಿದ್ದರು. ಈ ವಿಷಯ ಮುಚ್ಚಿಟ್ಟು ಕುಟುಂಬಸ್ಥರು ಅದೇ ಆಸ್ಪತ್ರೆಯಲ್ಲಿ ಜನರಲ್ ಸರ್ಜನ್ ಆಗಿದ್ದ ಡಾ.ಮಹೇಂದ್ರರೆಡ್ಡಿಗೆ ಮದುವೆ ಮಾಡಿಕೊಟ್ಟಿದ್ದರು.
ಮದುವೆ ಬಳಿಕ ಹೆಂಡತಿಯ ಆರೋಗ್ಯ ಸಮಸ್ಯೆ ತಿಳಿದು ಮಹೇಂದ್ರ ರೆಡ್ಡಿ, ಆಕೆಗೆ ಇಂಜೆಕ್ಷನ್ ನೀಡಿ ಕೊಂದು, ಸಹಜ ಸಾವೆಂದು ಬಿಂಬಿಸಿದ್ದ.
ವೈದ್ಯ ಮಹೇಂದ್ರ ರೆಡ್ಡಿ ತನ್ನ ವೈದ್ಯಕೀಯ ಬುದ್ದಿ ಬಳಸಿ ಕೊಲೆ ಮಾಡಿದ ಬಳಿಕ ನ್ಯಾಚುರಲ್ ಡೆತ್ ಆಗಿದೆ ಎಂದು ಎಲ್ಲರನ್ನು ನಂಬಿಸಿದ್ದ. ಇದನ್ನು ಸಹಜ ಸಾವು ಎಂದೇ ಕುಟುಂಬದವರು ನಂಬಿದ್ದರು.
ಕೃತಿಕಾ ಸಾವಿಗೆ ಸಂಬಂಧಿಸಿದಂತೆ ಆಕೆಯ ತಂದೆ ಮುನಿರೆಡ್ಡಿ ಎಂಬುವವರು ಪೊಲೀಸ್ ದೂರು ದಾಖಲಿಸಿದ್ದರು. ಕೃತಿಕಾ ಮುನಿ ರೆಡ್ಡಿ ಅವರ ಕಿರಿಯ ಮಗಳಾಗಿದ್ದು, ತನ್ನ ಅಳಿಯನೇ ಮಗಳನ್ನು ಕೊಂದಿದ್ದಾನೆ ಎಂದು ಆರೋಪಿಸಿದ್ದರು.
ದೂರಿನಲ್ಲಿ ಮದುವೆ ಬಳಿಕ ಮಹೇಂದ್ರ ಕೃತಿಕಾಳನ್ನು ನಿರ್ಲಕ್ಷಿಸಲು ಪ್ರಾರಂಭಿಸಿದ್ದ. ಮನೆಯ ಸಣ್ಣ ನಿರ್ಧಾರಗಳಿಗೂ ಸಹ ತನ್ನ ತಂದೆಯ ಒಪ್ಪಿಗೆಯನ್ನು ಪಡೆಯಬೇಕೆಂದು ಮತ್ತು ವೈಯಕ್ತಿಕ ಖರ್ಚುಗಳನ್ನು ಆಕೆಯೇ ಭರಿಸಬೇಕೆಂದು ಒತ್ತಾಯಿಸುತ್ತಿದ್ದ ಎಂದು ಉಲ್ಲೇಖಿಸಿದ್ದರು.
ಅದಲ್ಲದೆ ಮಹೇಂದ್ರ ದೊಡ್ಡ ಆಸ್ಪತ್ರೆಯನ್ನು ಕಟ್ಟಿಕೊಡುವಂತೆ ಆಕೆಗೆ ಒತ್ತಡ ಹಾಕಿದ್ದ. ತೆ. ಆಸ್ಪತ್ರೆ ನಿರ್ಮಾಣಕ್ಕೆ ಬೇಕಾಗುವಷ್ಟು ಹಣ ನಮ್ಮಲ್ಲಿ ಇಲ್ಲ ಎಂದು ದಂಪತಿಗಳ ವೈದ್ಯಕೀಯ ಅಭ್ಯಾಸಕ್ಕಾಗಿ ಮಾರತಹಳ್ಳಿಯಲ್ಲಿ 'Skin & Scalpel' ಎಂಬ ಕ್ಲಿನಿಕ್ ಅನ್ನು ಸ್ಥಾಪಿಸಿದ್ದಾಗಿ ಮುನಿ ರೆಡ್ಡಿ ಹೇಳಿದರು.
ಸತತ ಅರವಳಿಕೆ ಮದ್ದು ನೀಡಿದ್ದ ಅಳಿಯ
2025ರ ಏಪ್ರಿಲ್ 21ರಂದು ಹೊಟ್ಟೆಯ ಸಮಸ್ಯೆ ಸರಿಪಡಿಸುವ ಸಲುವಾಗು ಕೃತಿಕಾಗೆ ಇಂಟ್ರಾವೆನಸ್ (IV) ಔಷಧಿ ನೀಡಿರುವುದಾಗಿ ಮಹೇಂದ್ರ ಹೇಳಿದ್ದರು. ನಂತರ ಆ ರಾತ್ರಿ ಮತ್ತೊಂದು IV ಡೋಸ್ ನೀಡಲು ಬಂದಿದ್ದ. ಏಪ್ರಿಲ್ 23 ರಂದು, ಕೃತಿಕಾ IV ಸೈಟ್ನಿಂದ ನೋವಿನ ಬಗ್ಗೆ ಹೇಳಿಕೊಂಡಿದ್ದಳು. ಆದರೆ ಮಹೇಂದ್ರ ಆಕೆಗೆ ವಾಟ್ಸಾಪ್ ಮೂಲಕ ಅದನ್ನು ತೆಗೆಯದಂತೆ ಸೂಚಿಸಿದನು ಎಂದು ಮುನಿರೆಡ್ಡಿ ಹೇಳಿದ್ದಾರೆ.
ಅಲ್ಲದೆ 'ಆ ರಾತ್ರಿ ಮತ್ತೊಂದು ಡೋಸ್ ನೀಡುವುದಾಗಿ ಹೇಳಿದನು. ಅದೇ ದಿನ ರಾತ್ರಿ 9.30 ರ ಸುಮಾರಿಗೆ, ಔಷಧಿ ನೀಡಲು ಅವಳ ಕೋಣೆಗೆ ಹೋಗಿ ಮತ್ತೊಂದು ಡೋಸ್ ಔಷಧ ನೀಡಿದ್ದ. ಮರುದಿನ, ಏಪ್ರಿಲ್ 24 ರಂದು ಬೆಳಿಗ್ಗೆ, ಕೃತಿಕಾ ಸಂಪೂರ್ಣ ನಿತ್ರಾಣಳಾಗಿದ್ದಳು'.
'ಈ ವೇಳೆ ಕುಟುಂಬಸ್ಥರೆಲ್ಲರೂ ಭೀಯಭೀತರಾಗಿದ್ದೆವು. ಆಗ ಮಹೇಂದ್ರ ರೆಡ್ಡಿ ವೈದ್ಯನಾಗಿದ್ದರೂ ಆಕೆಗೆ ಸಿಪಿಆರ್ ಮಾಡಲಿಲ್ಲ. ಬಳಿಕ ಕೃತಿಕಾಳ ಪರಿಸ್ಥಿತಿ ನೋಡಿ ನಾವೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ದೆವು. ಅಲ್ಲಿ ವೈದ್ಯರಯ ಆಕೆ ಸಾವನ್ನಪ್ಪಿರುವುದಾಗಿ ಘೋಷಣೆ ಮಾಡಿದರು ಎಂದು ಮುನಿ ರೆಡ್ಡಿ ಆರೋಪಿಸಿದರು.
ಇನ್ನು ಆಕೆ ಸಾವನ್ನಪ್ಪಿದ ಬಳಿಕ ಮರಣೋತ್ತರ ಪರೀಕ್ಷೆ ನಡೆಸಲು ಮಹೇಂದ್ರ ಬೇಡ ಎಂದಿದ್ದ. ಅದಲ್ಲದೆ ಈ ಸಂಬಂಧ ಮಾವ ಮುನಿರೆಡ್ಡಿಯನ್ನು ಮನವೋಲಿಸಿದ್ದ.
ಆದರೆ ಕೃತಿಕಾ ಅವರ ಅಕ್ಕ, ರೇಡಿಯಾಲಜಿಸ್ಟ್ ಡಾ. ನಿಕಿತಾ ರೆಡ್ಡಿ ಸಾವಿನ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸಿದರು. ವಿವರವಾದ ತನಿಖೆಗೆ ಒತ್ತಾಯಿಸಿದರು. ನಂತರ ಅವರು ಮಾರತಹಳ್ಳಿ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವಿನ ದೂರು ದಾಖಲಿಸಿದರು ಎನ್ನಲಾಗಿದೆ.
ಕೃತಿಕಾ ಅವರ ಸಾವು ಸಹಜವಲ್ಲ.. ಅಸಹಜ ಎಂದು ತನಿಖೆಯಿಂದ ದೃಢಪಟ್ಟಿತ್ತು. FSL ವರದಿಯಿಂದ ಇದೊಂದು ಕೊಲೆ ಎಂಬುದು ದೃಢಪಡಿದೆ. ಎಫ್ ಎಸ್ ಎಲ್ ವರದಿ ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿ ಡಾ. ಮಹೇಂದ್ರ ರೆಡ್ಡಿಯನ್ನು ಬಂಧಿಸಿದ್ದಾರೆ.
ಕೃತಿಕಾ ಸಾವನ್ನಪ್ಪಿದ 6ತಿಂಗಳ ಬಳಿಕ ಇದು ಕೊಲೆ ಎಂದು ಬಯಲಾಗಿದೆ.