Publish Date: Sat, 21 Feb 2026 (09:27 IST)
Updated Date: Sat, 21 Feb 2026 (09:30 IST)
ಬೆಂಗಳೂರು: ಮುಡಾ ಮಾಜಿ ಆಯುಕ್ತ ನಟೇಶ್ ವಿರುದ್ಧ ಅಡಿಯೋ ಕೋರ್ಟ್ ಗೆ ಸಲ್ಲಿಕೆ ಮಾಡಲು ಹೊರಟಿದ್ದ ಬೆನ್ನಲ್ಲೇ ಸಾಮಾಜಿಕ ಕಾರ್ಯಕರ್ತ ಸ್ನೆಹಮಯಿ ಕೃಷ್ಣ ಅರೆಸ್ಟ್ ಆಗಿದ್ದು ಅನುಮಾನಕ್ಕೆ ಕಾರಣವಾಗಿದೆ.
ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ಬಹುಕೋಟಿ ಹಗರಣ ಆರೋಪ ಮಾಡಿದ್ದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರನ್ನು ನಿನ್ನೆ ನೋಟಿಸ್ ನೀಡಿ ವಿಚಾರಣೆ ನಡೆಸುವ ನೆಪದಲ್ಲಿ ಅರೆಸ್ಟ್ ಮಾಡಲಾಗಿತ್ತು. ನಕಲಿ ದಾಖಲೆಗಳನ್ನು ಸೃಷ್ಟಿಸಿ ತಮ್ಮ ವಿರುದ್ಧ ಸಾರ್ವಜನಿಕವಾಗಿ ಮಾನಹಾನಿಕಾರಕ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ನಟೇಶ್ ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು.
ಅದರಂತೆ ಅವರನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿ ನಿನ್ನೆ ರಾತ್ರಿಯಿಡೀ ಗ್ರಿಲ್ ಮಾಡಿದ್ದಾರೆ. ನಟೇಶ್ ಮುಂಬಡ್ತಿಗಾಗಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಗೆ 1.6 ಕೋಟಿ ರೂ. ಲಂಚ ನೀಡಿದ್ದರು ಎಂದು ಸ್ನೇಹಮಯಿ ಕೃಷ್ಣ ಆರೋಪಿಸಿದ್ದರು. ನಟೇಶ್ ವಿರುದ್ಧ ಆಡಿಯೋವೊಂದನ್ನು ಕೋರ್ಟ್ ಗೆ ಸಲ್ಲಿಸುವವರಿದ್ದರು.
ಹೀಗಾಗಿ ಇದನ್ನು ತಡೆಯಲೆಂದೇ ಈ ಅರೆಸ್ಟ್ ಆಗಿದೆ ಎನ್ನುವುದು ಸ್ನೇಹಮಯಿ ಕೃಷ್ಣ ಪರ ವಕೀಲರು ಮತ್ತು ಕುಟುಂಬಸ್ಥರ ಆರೋಪವಾಗಿದೆ. ನನ್ನ ತಂದೆಗೆ ಏನಾದರೂ ಹೆಚ್ಚು ಕಡಿಮೆಯಾದರೆ ಅದಕ್ಕೆ ಸರ್ಕಾರವೇ ಹೊಣೆ ಎಂದು ಅವರ ಪುತ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿನ್ನೆ ಸ್ನೇಹಮಯಿ ಕೃಷ್ಣ ಕೋರ್ಟ್ ಗೆ ಅಡಿಯೋ ಸಲ್ಲಿಕೆ ಮಾಡಬೇಕಿತ್ತು. ಆಗಲೇ ಅವರನ್ನು ಅರೆಸ್ಟ್ ಮಾಡಿರುವುದು ಅನುಮಾನಕ್ಕೆ ಕಾರಣವಾಗಿದೆ.