Publish Date: Wed, 21 Sep 2022 (14:06 IST)
Updated Date: Wed, 21 Sep 2022 (14:44 IST)
ಕುರಿ ಮಾಂಸವನ್ನು ನಾಯಿ ತಿಂದ ವಿಚಾರವಾಗಿ ನಡೆದ ಗಲಾಟೆಯಲ್ಲಿ ತಂದೆಯೊಬ್ಬ ತನ್ನ ಮಗಳನ್ನು ಕೊಂದಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಒಸ್ಮಾನಾಬಾದ್ ಜಿಲ್ಲೆಯ ತುಳಜಾಪುರ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.
ಕಾಜಲ್ ಶಿಂಧೆ ಎಂಬಾಕೆಯೇ ತಂದೆಯಿಂದ ಕೊಲೆಯಾದ ಪುತ್ರಿ. ಗಣೇಶ್ ಭೋಸ್ಲೆ ಎಂಬಾತನೇ ಪುತ್ರಿಯ ಕೊಂದ ತಂದೆ.
ಭಾನುವಾರ ಸಂಜೆ ಕಾಜಲ್ ಶಿಂಧೆ ರಾತ್ರಿ ಊಟಕ್ಕೆ ಎಂದು ಮಟನ್ ಬೇಯಿಸಿದ್ದರು. ಆದರೆ, ಇದಾದ ನಂತರ ಮನೆಯಲ್ಲಿ ಬೇರೆ ಕೆಲಸ ಮಾಡುತ್ತಿದ್ದಳು. ಅದೇ ಸಮಯದಲ್ಲಿ ನಾಯಿಯೊಂದು ಬೇಯಿಸಿದ್ದ ಮಾಂಸ ತಿಂದಿದೆ. ಇದನ್ನು ಕಾಜಲ್ ತಾಯಿ ಮೀರಾ ನೋಡಿದ್ದಾರೆ. ಆಗ ಇದರಿಂದ ಮನೆಯಿಂದ ಜಗಳ ಶುರುವಾಗಿದೆ.
ಇದೇ ವೇಳೆ ಕುಡಿದ ಅಮಲಿನಲ್ಲಿದ್ದ ಕಾಜಲ್ ತಂದೆ ಗಣೇಶ್ ಭೋಸ್ಲೆ ಕೋಪದಲ್ಲಿ ಗನ್ನಿಂದ ಮಗಳು ಕಾಜಲ್ ಮೇಲೆ ಗುಂಡು ಹಾರಿಸಿದ್ದಾರೆ. ತಂದೆ ಹಾರಿಸಿದ ಗುಂಡು ಎದೆಗೆ ತಗುಲಿ ಕಾಜಲ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಆಗ ಕಾಜಲ್ ಅವರನ್ನು ಕುಟುಂಬಸ್ಥರು ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದಾಗ್ಯೂ, ವೈದ್ಯರು ಆಕೆ ಮೃತಪಟ್ಟಿರುವುದಾಗಿ ಎಂದು ಘೋಷಿಸಿದ್ದಾರೆ.
ಈ ಸಂಬಂಧ ಕಾಜಲ್ ಪತಿ ಮನೋಜ್ ಸುನೀಲ್ ಶಿಂಧೆ ನಲದುರ್ಗ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ನಂತರ ತಂದೆ ಗಣೇಶ್ ಬೋಸ್ಲೆ ಮತ್ತು ತಾಯಿ ಮೀರಾ ಬೋಸ್ಲೆ ವಿರುದ್ಧ ಪ್ರಕರಣ ದಾಖಲಾಗಿದೆ. ಇನ್ನು ಘಟನೆಯ ನಂತರ ಆರೋಪಿ ಗಣೇಶ ಭೋಸಲೆ ತಲೆ ಮರೆಸಿಕೊಂಡಿದ್ದು, ತಾಯಿ ಮೀರಾ ಭೋಸ್ಲೆ ಅವರನ್ನು ಬಂಧಿಸಲಾಗಿದೆ. ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.