Publish Date: Wed, 28 Jun 2023 (07:17 IST)
Updated Date: Wed, 28 Jun 2023 (09:23 IST)
ರಾಮನಗರ : ಯಾರಾದರೂ ಸಂಚಾರಿ ನಿಯಮ ಉಲ್ಲಂಘನೆ ಮಾಡಿದರೆ ಡಿಎಲ್ ರದ್ದು ಮಾಡುತ್ತೇವೆ. ಡ್ರೈವಿಂಗ್ ವೇಳೆ ಮೊಬೈಲ್ ಬಳಕೆ, ಮದ್ಯಪಾನ ಮಾಡಿ ವಾಹನ ಚಲಾಯಿಸಿದರೆ ಹಾಗೂ ಮಿತಿ ಮೀರಿ ವಾಹನ ಚಾಲನೆ ಮಾಡಿದರೆ ಕೇಸ್ ಹಾಕುವ ಕೆಲಸ ಮಾಡುತ್ತೇವೆ ಎಂದು ಸಂಚಾರಿ ಮತ್ತು ರಸ್ತೆ ಸುರಕ್ಷತಾ ಎಡಿಜಿಪಿ ಅಲೋಕ್ ಕುಮಾರ್ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನಲೆ ಇಂದು ಎನ್ಹೆಚ್ ಅಧಿಕಾರಿಗಳ ಜೊತೆ ಅಲೋಕ್ ಕುಮಾರ್ ಹೆದ್ದಾರಿಯ ಪರಿಶೀಲನೆ ನಡೆಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಈ ರಸ್ತೆಯಲ್ಲಿ ಬಹಳ ಬಾರಿ ಸಂಚರಿಸಿದ್ದೇನೆ. ಕಳೆದ ಐದಾರು ತಿಂಗಳಿನಿಂದ ರಾಮನಗರ ವ್ಯಾಪ್ತಿಯಲ್ಲಿ 58ಕ್ಕೂ ಹೆಚ್ಚು ಜನ ಮೃತ ಪಟ್ಟಿದ್ದಾರೆ. 48ಕ್ಕೂ ಹೆಚ್ಚು ಅಪಘಾತಗಳಾಗಿವೆ.
ಎಲ್ಲೆಲ್ಲಿ ಅಪಘಾತ ನಡೆದಿದೆ ಆ ಸ್ಥಳಗಳ ಸಮಸ್ಯೆ ಬಗ್ಗೆ ಪರಿಶೀಲಿಸಿದ್ದೆವೆ. ಹೆದ್ದಾರಿಯಲ್ಲಿ ಆಗಮನ ಮತ್ತು ನಿರ್ಗಮನದ ಸಮಸ್ಯೆ ಇದೆ. ಕೆಲವೆಡೆ ರಸ್ತೆಯಲ್ಲಿ ತೀವ್ರ ತಿರುವುಗಳಿವೆ. ಇದರಿಂದ ವಾಹನಗಳು ಡಿವೈಡರ್ ಹಾರುತ್ತಿವೆ. ಹೈವೆಯಲ್ಲಿ ಲೇನ್ ಶಿಸ್ತನ್ನು ಬಳಸಬೇಕು. ಹೀಗಾಗಿ ಹೈವೇ ಪಟ್ರೋಲಿಂಗ್ ಅಗತ್ಯ ಇದೆ ಎಂದರು.