Publish Date: Tue, 17 Jun 2025 (11:17 IST)
Updated Date: Tue, 17 Jun 2025 (11:20 IST)
ಬೆಂಗಳೂರು: ಏನೇ ಆದ್ರೂ 28 ಕ್ಕೆ ಪ್ರಮಾಣವಚನ ಮಾಡ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಅವರು ಹೀಗೆ ಹೇಳುವುದಕ್ಕೂ ಕಾರಣವಿದೆ.
ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸುತ್ತಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ರಾಜೀನಾಮೆ ಕೊಡಬೇಕು ಎಂದು ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ. ಇದಕ್ಕೆ ಇಂದು ಡಿಸಿಎಂ ಡಿಕೆ ಶಿವಕುಮಾರ್ ಈ ರೀತಿ ತಿರುಗೇಟು ನೀಡಿದ್ದಾರೆ.
ಬಿಜೆಪಿಯವರಿಗೆ ಹೆಣದ ಮೇಲೆ ರಾಜಕೀಯ ಮಾಡುವುದೇ ಕೆಲಸ. ಮೊನ್ನೆ ನಾನೂ ಅಹಮದಾಬಾದ್ ಗೆ ವಿಮಾನ ದುರಂತವಾದ ಸ್ಥಳಕ್ಕೆ ಹೋಗಿದ್ದೆ. ಹಾಗಂತ ನಾನು ಘಟನೆಗೆ ಕೇಂದ್ರ ಸರ್ಕಾರವನ್ನು ದೂಷಿಸಿದ್ದೀನಾ? ಮೊನ್ನೆ ಅದೇನೋ ಕುಂಬಮೇಳ ಆಯ್ತಲ್ಲಾ ಅಲ್ಲಿ ಕಾಲ್ತುಳಿತವಾಗಿ ಸಾಕಷ್ಟು ಜನ ಸಾವನ್ನಪ್ಪಿದ್ದರು. ನಾವು ಏನಾದ್ರೂ ಹೇಳಿದ್ವಾ?
ನೋಡಿ ಸಾಕಷ್ಟು ಕಡೆ ಕಾಲ್ತುಳಿತವಾದ ಉದಾಹರಣೆಯಿದೆ. ಅದಕ್ಕೆಲ್ಲಾ ಅಲ್ಲಿನ ಸರ್ಕಾರವೇ ಹೊಣೆ ಎನ್ನಕ್ಕಾಗುತ್ತಾ? ಬಿಜೆಪಿ ನಾಯಕರಿಗೆ ನಮ್ಮನ್ನು ಕಂಡರೆ ಭಯ. ಆ ಭಯಕ್ಕೆ ಏನೇನೋ ಹೇಳ್ತಾರೆ ಎಂದ ಡಿಕೆಶಿ ಕೊನೆಗೆ ನಾಡಿದ್ದು 28 ಕ್ಕೆ ಮತ್ತೆ ವಿಧಾನಸೌಧದಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತೇವೆ. ನೀವೂ ಬನ್ನಿ ಎಂದು ವ್ಯಂಗ್ಯ ಮಾಡಿದ್ದಾರೆ. ಇದಕ್ಕೆ ಪತ್ರಕರ್ತರು ನೀವು ಸಿಎಂ ಆಗಿ ಪ್ರಮಾಣ ವಚನನಾ ಎಂದು ಕಾಲೆಳೆದಿದ್ದಾರೆ. ಇಲ್ಲ ಕಾಂಗ್ರೆಸ್ ಸರ್ಕಾರ ಎಂದು ಡಿಕೆಶಿ ಹೇಳಿದ್ದಾರೆ.