Publish Date: Thu, 01 Aug 2024 (11:07 IST)
Updated Date: Thu, 01 Aug 2024 (11:12 IST)
ನವದೆಹಲಿ: ರಾಜ್ಯದಲ್ಲಿ ಪಾದಯಾತ್ರೆ ವಿಚಾರವಾಗಿ ಬಿಜೆಪಿ-ಜೆಡಿಎಸ್ ನಾಯಕರ ನಡುವೆ ಭಿನ್ನಮತ ಎದ್ದಿರುವ ಬೆನ್ನಲ್ಲೇ ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಯಲ್ಲಿ ರಾಜ್ಯದ ಸಮಸ್ಯೆಗಳನ್ನು ವಿವರಿಸುವ ನೆಪದಲ್ಲಿ ಪ್ರಧಾನಿ ಮೋದಿಯನ್ನು ಭೇಟಿ ಮಾಡಿದ್ದು ಎಲ್ಲರ ಗಮನ ಸೆಳೆದಿದೆ. ಕೆಲವರು ಇದಕ್ಕೆ ನಾನಾ ಅರ್ಥ ಹುಡುಕುತ್ತಿದ್ದಾರೆ.
ಮುಡಾ ಹಗರಣ ವಿರುದ್ಧ ಬಿಜೆಪಿ ನಡೆಸಲು ಉದ್ದೇಶಿಸಿರುವ ಪಾದ ಯಾತ್ರೆಗೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಮ್ಮ ಎಂದಿನ ಶೈಲಿಯಲ್ಲಿ ಸ್ವಪಕ್ಷೀಯರ ವಿರುದ್ಧವೇ ಬಂಡಾಯವೆದ್ದಿದ್ದಾರೆ. ಬಿ ವೈ ವಿಜಯೇಂದ್ರರನ್ನು ಮುಂದೆ ಬಿಟ್ಟು ಸ್ವತಃ ಡಿಕೆ ಶಿವಕುಮಾರ್ ಅವರೇ ಸಿದ್ದರಾಮಯ್ಯನವರನ್ನು ಅಧಿಕಾರದಿಂದ ಕೆಳಗಿಳಿಸಲು ಮಾಡಿಸುತ್ತಿರುವ ಪಾದ ಯಾತ್ರೆ ಇದು ಎಂದು ಯತ್ನಾಳ್ ಗಂಭೀರ ಆರೋಪ ಮಾಡಿದ್ದರು.
ಇದರ ನಡುವೆ ನಿನ್ನೆ ದೆಹಲಿಯಲ್ಲಿ ಡಿಕೆ ಶಿವಕುಮಾರ್ ರಾಜ್ಯದ ಸಮಸ್ಯೆಗಳ ಬಗ್ಗೆ ವಿವರಿಸುವ ನೆಪದಲ್ಲಿ ಪ್ರಧಾನಿ ಮೋದಿಯನ್ನು ಭೇಟಿಯಾಗಿದ್ದಾರೆ. ಈ ಫೋಟೋಗಳು ವೈರಲ್ ಆಗುತ್ತಿದ್ದಂತೇ ಹಲವರು ನಾನಾ ರೀತಿಯ ಅರ್ಥ ಹುಡುಕುತ್ತಿದ್ದಾರೆ. ಯತ್ನಾಳ್ ಹೇಳಿದ ಹೊಂದಾಣಿಕೆ ರಾಜಕಾರಣಕ್ಕೂ ಈ ಭೇಟಿಗೂ ಸಂಬಂಧವಿರಬಹುದು ಎಂದು ಊಹಿಸುತ್ತಿದ್ದಾರೆ.
ರಾಜ್ಯದ ಯೋಜನೆಗಳಿಗೆ ಹಣ ಬಿಡುಗಡೆ ಮಾಡಲು ಮನವಿ ಜೊತೆಗೆ ರಾಜ್ಯ ರಾಜಕಾರಣದ ಬಗ್ಗೆಯೂ ಡಿಕೆಶಿ ಚರ್ಚಿಸಿರಬಹುದು ಎಂದು ಕೆಲವರು ವಿಶ್ಲೇಷಿಸುತ್ತಿದ್ದಾರೆ. ಸಿದ್ದರಾಮಯ್ಯನವರ ನಂತರ ಡಿಕೆಶಿಗೆ ಮುಖ್ಯಮಂತ್ರಿ ಪಟ್ಟದ ಮೇಲೆ ಕಣ್ಣಿದೆ. ಅದನ್ನು ಪಡೆಯಲು ಬಿಜೆಪಿಯನ್ನು ಬಳಸಿಕೊಳ್ಳುತ್ತಿದ್ದಾರಾ ಎಂಬ ಅನುಮಾನ ಹುಟ್ಟು ಹಾಕಿಸುತ್ತಿದೆ ಈ ಭೇಟಿ.