Publish Date: Thu, 29 Aug 2024 (10:21 IST)
Updated Date: Thu, 29 Aug 2024 (10:24 IST)
ಬೆಂಗಳೂರು: ಒಂದೆಡೆ ಸಿಎಂ ಸಿದ್ದರಾಮಯ್ಯ ಮುಡಾ ಹಗರಣದಲ್ಲಿ ಇಂದು ಕೋರ್ಟ್ ಕಟಕಟೆಯಲ್ಲಿ ನಿಂತರೆ, ಇನ್ನೊಂದೆಡೆ ಡಿಸಿಎಂ ಡಿಕೆ ಶಿವಕುಮಾರ್ ಗೆ ಕೂಡಾ ಇಂದು ಕೋರ್ಟ್ ತೀರ್ಪಿನ ತೂಗುಗತ್ತಿಯಿದೆ.
ಅಕ್ರಮ ಆಸ್ತಿ ಪ್ರಕರಣದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಗೆ ಇಂದು ನಿರ್ಣಾಯಕ ದಿನವಾಗಿದೆ. ಅವರ ಮೇಲಿರುವ ಅಕ್ರಮ ಆಸ್ತಿ ಗಳಿಕೆ ಪ್ರಕರಣವನ್ನು ಸಿಬಿಐಗೆ ನೀಡಿದ್ದು ಸರಿಯೋ, ತಪ್ಪೋ ಎಂದು ಇಂದು ಅಂತಿಮ ತೀರ್ಪು ಬರಲಿದೆ. ಇಂದು ಕರ್ನಾಟಕ ಹೈಕೋರ್ಟ್ ಈ ಬಗ್ಗೆ ಮಹತ್ವದ ತೀರ್ಪು ನೀಡಲಿದೆ.
2019 ರಲ್ಲಿ ಅಂದಿನ ಸಿಎಂ ಬಿಎಸ್ ಯಡಿಯೂರಪ್ಪ ಈ ಪ್ರಕರಣವನ್ನು ಸಿಬಿಐಗೆ ವಹಿಸಿದ್ದರು. 2023 ರಲ್ಲಿ ಸಿದ್ದರಾಮಯ್ಯ ಸರ್ಕಾರ ಆದೇಶ ಹಿಂಪಡೆದಿತ್ತು. ಆದರೆ ಇದನ್ನು ಪ್ರಶ್ನಿಸಿ ಸಿಬಿಐ ಮತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತ್ಯೇಕ ಮೇಲ್ಮನವಿ ಸಲ್ಲಿಸಿದ್ದರು.
ಇಂದು ಸಂಜೆ ಈ ಬಗ್ಗೆ ಕೋರ್ಟ್ ತೀರ್ಪು ನೀಡಲಿದೆ. ಅಂದಿನ ಸರ್ಕಾರ ಸಿಬಿಐಗೆ ವಹಿಸಿದ್ದು ತಪ್ಪೋ ಸರಿಯೋ ಎಂದು ತೀರ್ಪು ಪ್ರಕಟವಾಗಲಿದೆ. ಇದಾದ ಬಳಿಕ ಡಿಕೆಶಿ ಅಕ್ರಮ ಆಸ್ತಿ ಪ್ರಕರಣದ ತನಿಖೆಗೆ ಮತ್ತೊಮ್ಮೆ ಮರು ಜೀವ ಬರಲಿದೆ. ಹೀಗಾಗಿ ಇಂದು ಡಿಕೆಶಿ ಪಾಲಿಗೆ ಮಹತ್ವದ ದಿನವಾಗಿದೆ.