Publish Date: Thu, 28 Apr 2022 (16:54 IST)
Updated Date: Thu, 28 Apr 2022 (16:56 IST)
ಮಹತ್ವದ ಬೆಳವಣಿಗೆಯೊಂದರಲ್ಲಿ PSI ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ ತಲೆಮರೆಸಿಕೊಂಡಿರುವ ಮುಖ್ಯ ಆರೋಪಿ ದಿವ್ಯಾ ಹಾಗರಗಿ ಸೇರಿ 6 ಜನರ ಬಂಧನಕ್ಕಾಗಿ ಕೋರ್ಟ್ ವಾರಂಟ್ ಜಾರಿಗೊಳಿಸಿದೆ. ಅತ್ಯಂತ ಅಪರೂಪದ ಪ್ರಕರಣಗಳಲ್ಲಿ ಜಾರಿಯಾಗುವ ಕಠಿಣ ಮಾದರಿಯ ವಾರಂಟ್ ಇದಾಗಿದ್ದು, ಒಂದು ವಾರದೊಳಗೆ ಆರೋಪಿಗಳು ಶರಣಾಗದೇ ಹೋದಲ್ಲಿ ಕಾನೂನಿನನ್ವಯ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಅವಕಾಶವಿದೆ..ಹಗರಣದ ಮಾಸ್ಟರ್ ಮೈಂಡ್ ಎಂದೇ ಹೇಳಲಾಗುವ ದಿವ್ಯಾ ಹಾಗರಗಿ, ಮಂಜುನಾಥ್ ಮೇಳಕುಂದಿ, ರವೀಂದ್ರ ಮೇಳಕುಂದಿ, ಅರ್ಚನಾ, ಕಾಶಿನಾಥ್, ಶಾಂತಿಬಾಯಿಗೆ ಕಲಬುರಗಿಯ 3ನೇ ಜೆಎಂಎಫ್ಸಿ ನ್ಯಾಯಾಲಯದಿಂದ ಈ ಬಂಧನ ವಾರಂಟ್ ಜಾರಿಯಾಗಿದೆ. ಈ ಬೆಳವಣಿಗೆಯೊಂದಿಗೆ 3 ವಾರದಿಂದ ತಲೆ ಮರೆಸಿಕೊಂಡಿರುವ ಅಕ್ರಮದ ಮುಖ್ಯ ಆರೋಪಿ ದಿವ್ಯಾ ಸೇರಿದಂತೆ 6 ಆರೋಪಿಗಳೆಲ್ಲರಿಗೂ ಹೊಸ ಸಂಕಷ್ಟಎದುರಾಗಿದೆ. ನ್ಯಾಯಾಲಯದಿಂದ ಈ ವಾರಂಟ್ ಪಡೆದಿರುವ ಸಿಐಡಿ, ಇವರು ಎಲ್ಲಿದ್ದರೂ ಯಾವುದೇ ಕ್ಷಣ ಬಂಧಿಸಬಹುದಾಗಿದೆ..1 ವಾರದೊಳಗಡೆ ಆರೋಪಿಗಳು ಶರಣಾಗತಿ ಆಗದೆ ಹೋದಲ್ಲಿ ಇವರಿಗೆ ಸೇರಿರುವ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಅವಕಾಶ ಕಾನೂನಿನಡಿಯಲ್ಲಿದೆ.