Publish Date: Sun, 30 Aug 2026 (17:42 IST)
Updated Date: Sun, 30 Aug 2026 (16:56 IST)
ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದ ಆರೋಪ ಎದುರಿಸುತ್ತಿರುವ ಶಾಸಕ ಬಿ. ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ನಾಗೇಂದ್ರ ಅವರ ವಜಾಕ್ಕೆ ಆಗ್ರಹಿಸಿ ವಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಸದನದ ಒಳಗೂ-ಹೊರಗೂ ತೀವ್ರ ಪ್ರತಿಭಟನೆ ನಡೆಸಿ, ಬಳ್ಳಾರಿಗೆ ಬೃಹತ್ ಪಾದಯಾತ್ರೆ ನಡೆಸಲು ಸಜ್ಜಾಗಿದ್ದವು. ಆದರೆ, ಪಾದಯಾತ್ರೆ ಆರಂಭವಾಗುವ ಮುನ್ನವೇ ನಾಗೇಂದ್ರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಇದೀಗ ಬಿಜೆಪಿಯಲ್ಲಿ 'ಪಾದಯಾತ್ರೆ ಬೇಕೋ? ಬೇಡವೋ?' ಎಂಬ ಗೊಂದಲ ಮೂಡಿಸಿದೆ.
ನಾಗೇಂದ್ರ ಅವರ ರಾಜೀನಾಮೆಯನ್ನು ತಕ್ಷಣವೇ ಪಡೆದುಕೊಳ್ಳಬೇಕೆಂದು ಪಟ್ಟು ಹಿಡಿದಿದ್ದ ಬಿಜೆಪಿ, ಸೆಪ್ಟೆಂಬರ್ 1 ರಿಂದ ಬಳ್ಳಾರಿಗೆ ಪಾದಯಾತ್ರೆ ಹಮ್ಮಿಕೊಳ್ಳುವುದಾಗಿ ಘೋಷಿಸಿತ್ತು. ಆದರೆ, ಪ್ರತಿಪಕ್ಷಗಳ ತೀವ್ರ ಒತ್ತಡಕ್ಕೆ ಮಣಿದು ನಾಗೇಂದ್ರ ಅವರು ರಾಜೀನಾಮೆ ಸಲ್ಲಿಸಿದ್ದರಿಂದ ಪಾದಯಾತ್ರೆಯ ಮುಖ್ಯ ಉದ್ದೇಶವೇ ಈಡೇರಿದಂತಾಗಿದೆ.
ಪಕ್ಷದಲ್ಲೇ ಭಿನ್ನ ಅಭಿಪ್ರಾಯ:
ನಾಗೇಂದ್ರ ಅವರ ರಾಜೀನಾಮೆ ಪ್ರಸಂಗದ ಬಳಿಕ ಬಿಜೆಪಿ ನಾಯಕರ ನಡುವೆ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಮುಖ್ಯ ಆರೋಪಿಯಾಗಿದ್ದ ಸಚಿವರೇ ರಾಜೀನಾಮೆ ನೀಡಿದ ಮೇಲೆ ಇನ್ನು ಪಾದಯಾತ್ರೆ ನಡೆಸುವ ಅಗತ್ಯವಿಲ್ಲ, ಹೋರಾಟ ಇಲ್ಲಿಗೇ ಸಾಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದೆ.
ಮತ್ತೊಂದು ಬಣದ ವಾದ: ಬರಿ ಸಚಿವರ ರಾಜೀನಾಮೆಯಿಂದ ಹಗರಣ ಮುಗಿಯುವುದಿಲ್ಲ. ನಿಗಮದಿಂದ ದುರುಪಯೋಗವಾಗಿರುವ ಹಣವನ್ನು ಸಂಪೂರ್ಣವಾಗಿ ವಾಪಸ್ ತರಬೇಕು ಮತ್ತು ಹಗರಣದ ಹಿಂದಿರುವ ಇತರ ಪ್ರಭಾವಿ ನಾಯಕರನ್ನು ಬಯಲಿಗೆಳೆಯಲು ಪಾದಯಾತ್ರೆ ನಡೆಸಲೇಬೇಕು ಎಂದು ಪ್ರತಿಪಾದಿಸುತ್ತಿದೆ.
ಪಾದಯಾತ್ರೆ ವಿಚಾರವಾಗಿ ಪಕ್ಷದೊಳಗೆ ಉಂಟಾಗಿರುವ ಈ ಗೊಂದಲವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಬಹಿರಂಗವಾಗಿಯೇ ಒಪ್ಪಿಕೊಂಡಿದ್ದಾರೆ. "ನಾಗೇಂದ್ರ ಅವರ ರಾಜೀನಾಮೆಯಿಂದಾಗಿ ಪಾದಯಾತ್ರೆ ಮುಂದುವರಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ನಾಯಕರ ನಡುವೆ ಭಿನ್ನ ಅಭಿಪ್ರಾಯಗಳು ಇರುವುದು ಹೌದು. ಈ ಬಗ್ಗೆ ಹಿರಿಯ ನಾಯಕರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು" ಎಂದು ತಿಳಿಸಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ