Select Your Language

Notifications

webdunia
webdunia
webdunia
webdunia

ನಮ್ಮ ತಾಕತ್ ಪ್ರಶ್ನೆ ಮಾಡ್ತೀಯಾ, ದಮ್ ಇದ್ರೆ ಬಾ..: ನಾಗೇಂದ್ರಗೆ ಜನಾರ್ಧನ ರೆಡ್ಡಿ ಸವಾಲು

Janardhana Reddy
ಬಳ್ಳಾರಿ: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಪ್ರಕರಣದ ತನಿಖೆ ತೀವ್ರಗೊಳ್ಳುತ್ತಿದ್ದಂತೆ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಿ. ನಾಗೇಂದ್ರ, ಬಿಜೆಪಿಯ ವಿರುದ್ಧ ಹಾಗೂ 'ಮನುಷ್ಯತ್ವವಿಲ್ಲದ ಮನುಪಂಥಿಗಳು ನನ್ನನ್ನು ಗುರಿ ಮಾಡಿದ್ದಾರೆ' ಎಂದು ನೀಡಿದ್ದ ಹೇಳಿಕೆ ಮತ್ತು ಬಹಿರಂಗ ಸವಾಲಿಗೆ ಶಾಸಕ ಗಾಲಿ ಜನಾರ್ದನ ರೆಡ್ಡಿ ಅತ್ಯಂತ ಉಗ್ರವಾಗಿ ತಿರುಗೇಟು ನೀಡಿದ್ದಾರೆ.
 
"ನನ್ನ ತಾಕತ್, ಧಮ್ ಹಾಗೂ ರಾಜಕೀಯ ಹಿನ್ನೆಲೆಯನ್ನು ಪ್ರಶ್ನಿಸುವ ನಾಗೇಂದ್ರ, ನಿನ್ನ ನಿಜವಾದ ತಾಕತ್ ಏನೆಂದು ತೋರಿಸಲು ಧೈರ್ಯವಿದ್ದರೆ ನೇರವಾಗಿ ಚುನಾವಣಾ ಅಖಾಡಕ್ಕೆ ಬಾ" ಎಂದು ರೆಡ್ಡಿ ಬಹಿರಂಗ ಸವಾಲು ಹಾಕಿದ್ದಾರೆ.
 
ರಾಜಕೀಯ ಜನ್ಮ ನೆನಪಿಸಿದ ರೆಡ್ಡಿ: "ನಾಗೇಂದ್ರ, ನಿನ್ನ ರಾಜಕೀಯ ಬೆಳವಣಿಗೆಯಾಗಿದ್ದು ಯಾರಿಂದ ಎಂಬುದು ನೆನಪಿದೆಯೇ? ನಿನಗೆ ರಾಜಕೀಯವಾಗಿ ಜನ್ಮ ಕೊಟ್ಟಿದ್ದೇ ಇದೇ ಜನಾರ್ದನ ರೆಡ್ಡಿ. ಬಿಜೆಪಿಯಿಂದಲೇ ನೀನು ಬೆಳೆದು ಬಂದಿದ್ದೀಯಾ. ಈಗ ರಾಜೀನಾಮೆ ಕೊಡುವಾಗ ಮನುಷ್ಯತ್ವ, ಮನುಪಂಥಿ ಅಂತೆಲ್ಲಾ ಮಾತನಾಡಿ ಕಣ್ಣೀರು ಹಾಕುವ ನಾಟಕ ಮಾಡುತ್ತಿದ್ದೀಯಾ" ಎಂದು ಆಕ್ರೋಶ ವ್ಯಕ್ತಪಡಿಸಿದರು. "ಬಳ್ಳಾರಿಯಲ್ಲಿ ನಾನು ಇಲ್ಲದಿರುವ ಸಮಯದಲ್ಲಿ ಆಟವಾಡಿದ್ದೀಯಾ. ಈಗ ಜನಾರ್ದನ ರೆಡ್ಡಿ ಬಳ್ಳಾರಿಯಲ್ಲೇ ಇದ್ದಾನೆ. ತಾಕತ್, ಧಮ್ ಇದ್ದರೆ ನಿನ್ನ ಶಾಸಕ ಸ್ಥಾನಕ್ಕೂ ರಾಜೀನಾಮೆ ಕೊಟ್ಟು ಬಾ, ತಕ್ಷಣವೇ ಚುನಾವಣೆಗೆ ಹೋಗೋಣ. ಬಳ್ಳಾರಿಯ ಜನತೆಯ ನ್ಯಾಯಾಲಯದಲ್ಲೇ ಯಾರು ಏನು ಎಂಬುದು ತೀರ್ಮಾನವಾಗಲಿ" ಎಂದು ಸವಾಲೆಸೆದರು.
 
ವಾಲ್ಮೀಕಿ ನಿಗಮದ ಹಗರಣದ ಕೋಟ್ಯಾಂತರ ರೂಪಾಯಿ ಹಣ ಮುಂಬೈನ ಖಾತೆಗಳಿಗೆ ವರ್ಗಾವಣೆಯಾಗಿದೆ. ನೂರಾರು ನಕಲಿ ಖಾತೆಗಳ ಮೂಲಕ ಅಕ್ರಮ ಎಸಗಲಾಗಿದೆ ಎಂದು ಆರೋಪಿಸಿದ ರೆಡ್ಡಿ, ದಲಿತ ಸಮಾಜದ ಅಭಿವೃದ್ಧಿಗೆ ಕಾಯ್ದಿರಿಸಿದ್ದ ಹಣವನ್ನು ಲೂಟಿ ಮಾಡಿ ಈಗ 'ದಲಿತ ಕಾರ್ಡ್' ಬಳಸಿ ನುಣುಚಿಕೊಳ್ಳಲು ಯತ್ನಿಸುತ್ತಿದ್ದೀಯಾ ಎಂದು ವಾಗ್ದಾಳಿ ನಡೆಸಿದರು.
 
ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ತೀವ್ರಗೊಂಡ ಹಿನ್ನೆಲೆಯಲ್ಲಿ ಬಿ. ನಾಗೇಂದ್ರ ರಾಜೀನಾಮೆ ಸಲ್ಲಿಸಿದ್ದರು. ರಾಜೀನಾಮೆ ಬಳಿಕ ಮಾತನಾಡಿದ್ದ ನಾಗೇಂದ್ರ, "ನನ್ನನ್ನು ತನಿಖಾ ಸಂಸ್ಥೆಗಳ ಹೆಸರಿನಲ್ಲಿ ಹೆದರಿಸಲು ಸಾಧ್ಯವಿಲ್ಲ, ಧೈರ್ಯವಿದ್ದರೆ ಬಳ್ಳಾರಿಯಲ್ಲಿ ನನ್ನ ವಿರುದ್ಧ ಗೆದ್ದು ತೋರಿಸಲಿ" ಎಂದು ಬಿಜೆಪಿಗೆ ಸವಾಲು ಹಾಕಿದ್ದರು. ನಾಗೇಂದ್ರ ಅವರ ಈ ಹೇಳಿಕೆಗೆ ಈಗ ಜನಾರ್ದನ ರೆಡ್ಡಿ ಖಡಕ್ ಆಗಿ ಸವಾಲು ಸ್ವೀಕರಿಸಿ ಪ್ರತಿಸವಾಲು ಎಸೆದಿದ್ದಾರೆ.  

Share this Story:

Follow Webdunia kannada

ಮುಂದಿನ ಸುದ್ದಿ

ರೋಗಿಗಳು ಕಾಯುತ್ತಿದ್ದರೆ, ಒಳಗೆ ಮದರಂಗಿ ಹಾಕುವಲ್ಲಿ ಬ್ಯುಸಿಯಾದ ಆಸ್ಪತ್ರೆ ಸಿಬ್ಬಂದಿ Video