Publish Date: Fri, 21 Dec 2018 (12:10 IST)
Updated Date: Fri, 21 Dec 2018 (12:12 IST)
ಅವಧಿ ಮುಗಿದ ಮಾತ್ರೆಗಳ ಜೊತೆಗೆ ಅವಧಿ ಪೂರ್ಣಗೊಳ್ಳದ ಹಾಗೂ ರೋಗಿಗಳಿಗೆ ವಿತರಣೆ ಮಾಡಬೇಕಿದ್ದ ಮಾತ್ರೆಗಳಿಗೂ ಬೆಂಕಿ ಹಚ್ಚಿರುವ ಘಟನೆ ನಡೆದಿದೆ.
ಕಲಬುರ್ಗಿಯ ತಾಲೂಕು ಆರೋಗ್ಯಾಧಿಕಾರಿ ಕಛೇರಿ ಬಳಿ ಘಟನೆ ನಡೆದಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಔಷಧ ಬೆಂಕಿಗೆ ಆಹುತಿಯಾಗಿದೆ.
ಆರೋಗ್ಯ ಇಲಾಖೆ ಅಧಿಕಾರಿಗಳ ಕಾರ್ಯವೈಖರಿಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಅವಧಿ ಮೀರಿದ್ದ ಔಷಧ ಎಂದು ಅಧಿಕಾರಿಗಳು ಸಮಜಾಯಿಷಿ ನೀಡುತ್ತಿದ್ದಾರೆ.
ವೈದ್ಯಕೀಯ ತ್ಯಾಜ್ಯವನ್ನು ವೈಜ್ಞಾನಿಕ ರೀತಿಯಲ್ಲಿಯೇ ವಿಲೇವಾರಿ ಮಾಡಬೇಕೆಂಬ ನಿಯಮವಿದೆ. ಆದರೂ ಬಯಲು ಪ್ರದೇಶದಲ್ಲಿ ಬೆಂಕಿ ಹಚ್ಚಿ ನಿರ್ಲಕ್ಷ್ಯ ತೋರಿರುವ ಸಿಬ್ಬಂದಿಯ ಕ್ರಮಕ್ಕೆ ಜನರು ಗರಂ ಆಗಿದ್ದಾರೆ.
ಹಿರಿಯ ಅಧಿಕಾರಿಗಳು ಬಂದು ಕೆಳಹಂತದ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ನಂತರ ಅಲ್ಲಿದ್ದ ಸಿಬ್ಬಂದಿ ಬೆಂಕಿ ನಂದಿಸಿದರು.
ತಾಲೂಕು ವೈದ್ಯಾಧಿಕಾರಿ ಡಾ.ರಾಜಕುಮಾರ್ ನಿರ್ಲಕ್ಷ್ಯತನದಿಂದ ಘಟನೆ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.
ಘಟನೆಗೆ ಕಾರಣರಾದವರ ವಿರುದ್ಧ ಕ್ರಮಕ್ಕೆ ಸಾರ್ವಜನಿಕರು ಆಗ್ರಹ ಮಾಡಿದ್ದಾರೆ.