Publish Date: Sun, 07 Jul 2024 (17:34 IST)
Updated Date: Sun, 07 Jul 2024 (17:36 IST)
ಬೆಂಗಳೂರು: ಸೊಳ್ಳೆಗಳಿಂದ ಡೆಂಗ್ಯೂ ಹರಡುತ್ತದೆ ಎಚ್ಚರಿಕೆಯಿಂದಿರಿ ಹಾಗೆಯೇ ಬಿಜೆಪಿಯಿಂದ ಸುಳ್ಳು ಹರಡುತ್ತದೆ ಹುಷಾರಾಗಿರಿ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
ರಾಜ್ಯದಲ್ಲಿ ಡೆಂಗ್ಯೂ ಕಾಯಿಲೆ ಹೆಚ್ಚಾಗುತ್ತಿದ್ದು, ಆರೋಗ್ಯ ಸಚಿವರು ಮಾತ್ರ ಈಜಾಡುತ್ತಾ ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ ಎಂಬ ಬಿಜೆಪಿ ಆರೋಪಕ್ಕೆ ಕಾಂಗ್ರೆಸ್ ತಿರುಗೇಟು ನೀಡಿದೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿದ ಕಾಂಗ್ರೆಸ್, ಡೆಂಗ್ಯೂ ರೋಗ ನಿಯಂತ್ರಣಕ್ಕೆ ಅರೋಗ್ಯ ಸಚಿವ ದಿನೇಶ್ ಗುಂಡುರಾವ್ ಅವರ ನೇತೃತ್ವದಲ್ಲಿ ನಮ್ಮ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ, ಅರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಡೆಂಗ್ಯೂ ರೋಗ ನಿಯಂತ್ರಣಕ್ಕೆ ಹಾಗೂ ಚಿಕಿತ್ಸೆಗೆ ಇಲಾಖೆಯನ್ನು ಸಜ್ಜುಗೊಳಿಸಿದ್ದಾರೆ.
ಅಲ್ಲದೆ ತಮ್ಮ ಉಸ್ತುವಾರಿ ಜಿಲ್ಲೆಯಲ್ಲಿ ನೂತನ ಈಜುಗೊಳವನ್ನು ಉದ್ಘಾಟಿಸಿ, ತಾವು ಈಜುವ ಮೂಲಕ ಯುವ ಸಮುದಾಯಕ್ಕೆ ಪ್ರೇರಣೆ ನೀಡಿದ್ದಾರೆ.
ಬಿಜೆಪಿಯವರೇ, ಹಿಂದೆ ಕೋವಿಡ್ ಉತ್ತುಂಗದಲ್ಲಿದ್ದಾಗ ಅರೋಗ್ಯ ಸಚಿವರಾಗಿದ್ದ ಸುಧಾಕರ್ ಈಜು ಮೋಜು ಮಾಡಿದ್ದರ ಬಗ್ಗೆ ನೆನಪಿದೆಯೇ?
ಹತ್ರಾಸ್ ದುರಂತದಲ್ಲಿ 123ಕ್ಕೂ ಹೆಚ್ಚು ಮಂದಿ ಜೀವ ಬಿಟ್ಟಿರುವಾಗ ಪ್ರಧಾನಿ ಮೋದಿ ಆ ಕಡೆ ತಲೆ ಹಾಕಿಯೂ ಮಲಗಿಲ್ಲ ಎಂಬ ಸತ್ಯ ತಿಳಿದಿದೆಯೇ?
ಮಣಿಪುರದಲ್ಲಿ ಡೆಂಗ್ಯೂಗಿಂತಲೂ ಭೀಕರವಾದ ದ್ವೇಷ ತಾಂಡವವಾಡುತ್ತಿರುವಾಗ ಪ್ರಧಾನಿ ಮೋದಿ ಅತ್ತ ತಿರುಗಿಯೂ ನೋಡಲಿಲ್ಲ ಎಂಬ ವಾಸ್ತವದ ಅರಿವಿದೆಯೇ?
ರೈಲು ದುರಂತಗಳಲ್ಲಿ ನೂರಾರು ಮಂದಿ ಬಲಿಯಾದಾಗ ನಿಮ್ಮ ಕೇಂದ್ರ ಸರ್ಕಾರದ ಸಚಿವರು ಹೊಣೆಗಾರಿಕೆ ಪ್ರದರ್ಶಿಸಿಲ್ಲ ಎಂಬ ಸತ್ಯ ತಿಳಿದಿದೆಯೇ?
ಕೊನೆಯದಾಗಿ ಸಾರ್ವಜನಿಕರ ಅವಗಹನೆಗೆ -
ಸೊಳ್ಳೆಗಳಿಂದ ಡೆಂಗ್ಯೂ ಹರಡುತ್ತದೆ ಎಚ್ಚರಿಕೆಯಿಂದಿರಿ.
ಬಿಜೆಪಿಯಿಂದ ಸುಳ್ಳು ಹರಡುತ್ತದೆ ಹುಷಾರಾಗಿರಿ!