Publish Date: Sat, 30 Sep 2017 (18:13 IST)
Updated Date: Sat, 30 Sep 2017 (18:17 IST)
ಮೈಸೂರು: ವಿಶ್ವವಿಖ್ಯಾತ 407ನೇ ಮೈಸೂರು ದಸರಾ ಜಂಬೂಸವಾರಿಗೆ ಸಿಎಂ ಸಿದ್ದರಾಮಯ್ಯ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.
ಸಂಜೆ 4.45ರ ಶುಭ ಕುಂಭ ಲಗ್ನದಲ್ಲಿ ಸಿಎಂ, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ 750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿದ್ದ ನಾಡದೇವತೆ ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಷನೆ ಮಾಡಿದರು. ಇದಕ್ಕೆಂದೆ ಅರಮನೆ ಮುಂಭಾಗದಲ್ಲಿ ವಿಶೇಷ ವೇದಿಕೆ ಹಾಕಲಾಗಿತ್ತು. ಮೇಯರ್ ರವಿಕುಮಾರ್, ಸಚಿವ ಡಾ.ಎಚ್.ಸಿ.ಮಹದೇವಪ್ಪ ಹಾಗೂ ಜಿಲ್ಲಾಧಿಕಾರಿ ಡಿ.ರಂದೀಪ್ ಇದೇ ವೇಳೆ ಉಪಸ್ಥಿತರಿದ್ದರು.
ಇದಕ್ಕೂ ಮೊದಲು 2.15ರ ಶುಭ ಮಕರ ಲಗ್ನದಲ್ಲಿ ಸಿಎಂ ಸಿದ್ದರಾಮಯ್ಯ ನಂದಿಧ್ವಜಕ್ಕೆ ಸಚಿವರ ಜತೆ ಸೇರಿ ಪೂಜೆ ಸಲ್ಲಿಸಿದರು. ನಾಡಿನ ಜನತೆಗೆ ದಸರಾ ಹಬ್ಬದ ಶುಭಾಶಯ ತಿಳಿಸಿ, ಜಂಬೂಸವಾರಿಯ ಮೆರವಣಿಗೆಗೆ ಚಾಲನೆ ನೀಡಿದರು.
ಅಲ್ಲದೆ ಈ ಬಾರಿ ಜಂಬೂಸವಾರಿಯ ಮೆರವಣಿಗೆಯಲ್ಲಿ 40 ಸ್ತಬ್ಧ ಚಿತ್ರಗಳು, 60 ಕಲಾತಂಡಗಳು ಭಾಗವಹಿಸಿದ್ದವು. ಜಂಬೂಸವಾರಿ ವೀಕ್ಷಣೆಗೆ ಅರಮನೆ ಮುಂಭಾಗ ಹಾಗೂ ಮೆರವಣಿಗೆ ಸಾಗುವ ಬನ್ನಿಮಂಟಪದವರೆಗೂ ಜನ ಸಮೂಹ ಸೇರಿತ್ತು.