Publish Date: Thu, 29 Aug 2024 (09:09 IST)
Updated Date: Thu, 29 Aug 2024 (09:18 IST)
ಬೆಂಗಳೂರು: ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ಆರೋಪದ ಹಿನ್ನಲೆಯಲ್ಲಿ ನಟ ದರ್ಶನ್ ರನ್ನು ಇಂದು ಬೆಳಗ್ಗೆಯೇ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗುತ್ತಿದೆ. ಇದೀಗ ಪರಪ್ಪನ ಅಗ್ರಹಾರದಿಂದ ಅನಂತಪುರ ಮಾರ್ಗವಾಗಿ ಬಳ್ಳಾರಿಗೆ ಬರುತ್ತಿದ್ದಾರೆ.
ಸುಮಾರು 10 ಗಂಟೆಗೆ ಬಳ್ಳಾರಿ ಸೆಂಟ್ರಲ್ ಜೈಲ್ ಗೆ ದರ್ಶನ್ ತಲುಪುವ ನಿರೀಕ್ಷೆಯಿದೆ. ಮೂರು ಪೊಲೀಸ್ ವಾಹನಗಳ ಭದ್ರತೆಯಲ್ಲಿ ದರ್ಶನ್ ರನ್ನು ಶಿಫ್ಟ್ ಮಾಡಲಾಗುತ್ತಿದೆ. ಭದ್ರತೆ ದೃಷ್ಟಿಯಿಂದ ಎರಡು ಬಾರಿ ದರ್ಶನ್ ರನ್ನು ಬೇರೆ ಬೇರೆ ವಾಹನಕ್ಕೆ ವರ್ಗಾಯಿಸಲಾಗಿದೆ.
ಅಲ್ಲದೆ, ದರ್ಶನ್ ಇರುವುದು ಯಾರಿಗೂ ಗೊತ್ತಾಗಬಾರದು ಎಂಬ ಕಾರಣದಿಂದ ವಾಹನಕ್ಕೆ ಸ್ಕ್ರೀನ್ ಅಳವಡಿಸಿ ಕವರ್ ಮಾಡಲಾಗಿದೆ. ಬಾಗೇಪಲ್ಲಿ, ಅನಂತಪುರ ಮಾರ್ಗವಾಗಿ ಬಳ್ಳಾರಿಗೆ ತೆರಳುತ್ತಿದ್ದಾರೆ. ಭದ್ರತೆ ದೃಷ್ಟಿಯಿಂದ ಬೇರೊಂದು ಮಾರ್ಗದಿಂದ ದರ್ಶನ್ ರನ್ನು ಕರೆತರಲಾಗುತ್ತಿದೆ.
ಇಂದು ನಸುಕಿನ ಜಾವ 4 ಗಂಟೆ ಸುಮಾರಿಗೆ ದರ್ಶನ್ ರನ್ನು ಪರಪ್ಪನ ಅಗ್ರಹಾರದಿಂದ ಕರೆದೊಯ್ಯಲಾಗಿದೆ. ದರ್ಶನ್ ಎಂಟ್ರಿ ಹಿನ್ನಲೆಯಲ್ಲಿ ಬಳ್ಳಾರಿ ರಸ್ತೆಗಳಲ್ಲಿ ಭದ್ರತೆ ಒದಗಿಸಲಾಗಿದೆ. ಸೆಂಟ್ರಲ್ ಜೈಲ್ ಸಮೀಪ ಸುಮಾರು 50 ಮಂದಿ ಪೊಲೀಸರು ಜಮಾಯಿಸಿದ್ದಾರೆ. ಇಲ್ಲಿ ಅಭಿಮಾನಿಗಳು ಜಮಾಯಿಸುವ ಸಾಧ್ಯತೆಯಿರುವುದರಿಂದ ತೊಂದರೆಯಾಗದಂತೆ ಪೊಲೀಸರು ಸೇರಿದ್ದಾರೆ.