Publish Date: Wed, 28 Aug 2024 (10:18 IST)
Updated Date: Wed, 28 Aug 2024 (10:22 IST)
ಬೆಂಗಳೂರು: ಒಂದೆಡೆ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಲಿದ್ದಾರೆ. ಇದರ ನಡುವೆ ಪವಿತ್ರಾ ಗೌಡಗೆ ಇಂದು ಮತ್ತೊಂದು ಮಹತ್ವದ ದಿನವಾಗಿದೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪವಿತ್ರಾ ಗೌಡ ಸದ್ಯಕ್ಕೆ ಎ1 ಆರೋಪಿಯಾಗಿದ್ದಾರೆ. ಅವರೀಗ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಕಳೆದ ಎರಡೂವರೆ ತಿಂಗಳ ಬಂಧನದ ನಂತರ ಇತ್ತೀಚೆಗೆ ಪವಿತ್ರಾ ಪರ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಕಳೆದ ಬಾರಿ ಕೋರ್ಟ್ ಅರ್ಜಿ ತಳ್ಳಿ ಹಾಕಿತ್ತು.
ಆದರೆ ನಿನ್ನೆ ಮತ್ತೆ ಅವರ ಅರ್ಜಿ ವಿಚಾರಣೆಗೆ ಬಂದಿದ್ದು, ಪವಿತ್ರಾ ಪರ ವಾದ ಮಾಡುತ್ತಿರುವ ಹಿರಿಯ ವಕೀಲೆ ಟಾಮಿ ಸೆಬಾಸ್ಟಿಯನ್ ಮಹಿಳೆ ಎಂಬ ಕಾರಣಕ್ಕಾದರೂ ಪವಿತ್ರಾಗೆ ವಿನಾಯ್ತಿ ನೀಡಿ ಎಂದು ಮನವಿ ಮಾಡಿದ್ದರು. ಇಂದಿಗೆ ಅವರ ಜಾಮೀನು ಅರ್ಜಿಯ ತೀರ್ಪು ಮುಂದೂಡಲಾಗಿತ್ತು.
ಇಂದು ಪವಿತ್ರಾ ಜಾಮೀನು ಅರ್ಜಿ ತೀರ್ಪು ಬರಲಿದೆ. ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ಹಿನ್ನಲೆಯಲ್ಲಿ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಎಲ್ಲಾ ಆರೋಪಿಗಳನ್ನೂ ಬೇರೆ ಬೇರೆ ಜೈಲಿಗೆ ವರ್ಗಾಯಿಸಲಾಗಿದೆ. ಆದರೆ ಪವಿತ್ರಾ ಮಾತ್ರ ಪರಪ್ಪನ ಅಗ್ರಹಾರದಲ್ಲೇ ಕಳೆಯಲಿದ್ದಾರೆ. ಇದರ ನಡುವೆ ಇಷ್ಟು ದಿನ ಜೈಲಿನಲ್ಲೂ ಒಟ್ಟಿಗೇ ಇದ್ದ ದರ್ಶನ್ ಮತ್ತು ಪವಿತ್ರಾ ಈಗ ಬೇರೆ ಬೇರೆಯಾಗುತ್ತಿದ್ದಾರೆ. ಈ ಆತಂಕದ ಜೊತೆಗೆ ಜಾಮೀನು ಅರ್ಜಿ ಏನಾಗುವುದೋ ಎಂಬ ಚಿಂತೆ ಪವಿತ್ರಾಗೆ.