Publish Date: Wed, 02 Feb 2022 (15:17 IST)
Updated Date: Wed, 02 Feb 2022 (19:20 IST)
ಪಾಲಿಕೆಯ ಪೂರ್ವಾನುಮತಿ ಪಡೆಯದೇ ಬೆಂಗಳೂರು ಮಹಾ ನಗರ ವ್ಯಾಪ್ತಿಯಲ್ಲಿ ರಸ್ತೆಯನ್ನು ಕಡಿದರೆ, ಅವರ ವಿರುದ್ಧ ಕ್ರಿಮಿನಲ್ ದಾವೆ ದಾಖಲಾಗಲಿದೆ!
ಇಂತದ್ದೊಂದು ಖಡಕ್ ಸಂದೇಶವನ್ನು ಬೆಂಗಳೂರು ಮಹಾನಗರ ಪಾಲಿಕೆ ಮುಖ್ಯ ಆಯುಕ್ತ ಗೌರವ ಗುಪ್ತಾ ರವಾನಿಸಿದ್ದಾರೆ.
ಬೆಂಗಳೂರಿನಲ್ಲಿ ಕೇಬಲ್ ಮಾಫಿಯಾಗೆ ಎಲ್ಲಾ ರಸ್ತೆಗಳು ಹದಗೆಟ್ಟಿವೆ. ಗುಂಡಿಗಳು ಬಿದ್ದು ಮುಗ್ಧ ಜನರ ಜೀವವನ್ನು ಬಲಿ ಪಡಿಯುತ್ತಿವೆ. ಎರಡು ದಿನದ ಹಿಂದಷ್ಟೇ ಮಾಗಡಿ ಮುಖ್ಯ ರಸ್ತೆಯಲ್ಲಿ ಶಿಕ್ಷಕಿ ರಸ್ತೆ ಗುಂಡಿಗೆ ಬಲಿಯಾಗಿದ್ದಳು. ಇದನ್ನು ಖಂಡಿಸಿ ಬಿಬಿಎಂಪಿ ಅಧಿಕಾರಿಗಳ ವಿರುದ್ಧವೇ ಆಮ್ ಆದ್ಮಿ ಪಾರ್ಟಿ ಕಾರ್ಯಕರ್ತರು ದೂರು ನೀಡಿದ್ದರು.
ಕೇಬಲ್ ಮಾಫಿಯಾ, ಜಲಮಂಡಳಿ ಕಾಮಗಾರಿಗಳಿಂದ ಬೆಂಗಳೂರಿನ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ಇದರಿಂದ ರಸ್ತೆ ಅವಘಡಗಳಲ್ಲಿ ಮುಗ್ಧರು ಜೀವ ಕಳೆದುಕೊಂಡ ಪ್ರಕರಣಗಳು ಮರುಕಳಿಸುತ್ತಲೇ ಇವೆ. ಇದರಿಂದ ಎಚ್ಚೆತ್ತ ಬೆಂಗಳೂರು ಮಹಾನಗರ ಪಾಲಿಕೆ ಮುಖ್ಯ ಆಯುಕ್ತ ಗೌರವ ಗುಪ್ತಾ ರಸ್ತೆ ಕತ್ತರಿಸುವರಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.
ರಸ್ತೆ ಕಡಿಯುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುದ್ದಿಗಾರರ ಜತೆ ಮಾತನಾಡಿದ ಪಾಲಿಕೆ ಮುಖ್ಯ ಆಯುಕ್ತರು, ಕೆಲವು ರಸ್ತೆಗಳಲ್ಲಿ ವಿದ್ಯುತ್ ಕೇಬಲ್ಗಳು ಇವೆ. ಜಲಮಂಡಳಿ ಅಳವಡಿಸಿರುವ ಕುಡಿಯುವ ನೀರಿನ ಪೈಪುಗಳು ಇವೆ. ಅವುಗಳಿಗೆ ಹಾನಿ ಉಂಟಾದಾಗ ರಸ್ತೆ ಕತ್ತರಿಸಬೇಕಾಗುತ್ತದೆ. ಆದರೆ ರಸ್ತೆ ಕತ್ತರಿಸಬೇಕಾದರೆ, ಬಿಬಿಎಂಪಿ ಪೂರ್ವಾನುಮತಿ ಪಡೆಯುವುದು ಕಡ್ಡಾಯ. ಇದಕ್ಕಾಗಿಯೇ ಪ್ರತ್ಯೇಕ ವ್ಯವಸ್ಥೆ ರೂಪಿಸಲಾಗಿದೆ ಎಂದರು.