Publish Date: Mon, 02 Jan 2023 (14:30 IST)
Updated Date: Mon, 02 Jan 2023 (14:16 IST)
ಬೆಂಗಳೂರು : ಹೊಸ ವರ್ಷ ಒಂದೆಡೆಯಾದರೆ, ಮತ್ತೊಂದೆಡೆ ವೈಕುಂಠ ಏಕಾದಶಿ. ಬೆಂಗಳೂರಿನ ದೇವಸ್ಥಾನಗಳು ಮದುವಣಗಿತ್ತಿಯಂತೆ ಸಿಂಗಾರಗೊಂಡಿವೆ.
ಕಳೆದ 2 ವರ್ಷದಿಂದ ಕೊರೊನಾ ಹಿನ್ನೆಲೆ ವೈಕುಂಠ ಏಕಾದಶಿಯನ್ನ ಸಂಭ್ರಮ, ಸಡಗರದಿಂದ ಆಚರಿಸಲು ಆಗಿರಲಿಲ್ಲ. ಇದೀಗ ಕೊಂಚ ಕೊರೊನಾ ಆತಂಕದ ಮಧ್ಯೆ ವೈಕುಂಠ ಏಕಾದಶಿ ನಡೆಯಲಿದೆ. ದೇವಾಲಯಗಳಿಗೆ ಸಾವಿರಾರು ಭಕ್ತಾದಿಗಳ ದಂಡೇ ಹರಿದು ಬರಲಿದೆ.
ಹೊಸ ವರ್ಷ ಹಿನ್ನೆಲೆ ನಿನ್ನೆ ವೈಯಾಲಿಕಾವಲ್ನ ಟಿಟಿಡಿ ದೇವಸ್ಥಾನಕ್ಕೆ 25 ಸಾವಿರಕ್ಕೂ ಹೆಚ್ಚು ಭಕ್ತರು ಭೇಟಿ ನೀಡಿದ್ರು. ತಿರುಪತಿಯಿಂದ ಲಾಡು ಕಡಿಮೆ ಪ್ರಮಾಣದಲ್ಲಿ ಬಂದ ಹಿನ್ನೆಲೆ 10 ಸಾವಿರ ಲಾಡು ವಿತರಣೆ ಮಾಡಿದ್ರು.
ಇಂದು ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ಬೆಳಗ್ಗೆ 3 ಗಂಟೆಯಿಂದ ರಾತ್ರಿ 12 ಗಂಟೆವರೆಗೂ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಭಕ್ತಾದಿಗಳಿಗೆ ಪಾಸ್ಗಳನ್ನು ವಿತರಿಸಲಾಗಿದೆ.
ಬೆಳಗ್ಗೆ 3 ಗಂಟೆಯಿಂದ ಪೂಜೆಗಳು ನಡೆಯಲಿವೆ. ಸುಪ್ರಭಾತ ಸೇವೆ, ಅರ್ಚನ ಸೇವೆ, ದ್ವಾರ ಸೇವೆ ನಡೆಯುತ್ತವೆ. ಬೆಳಗ್ಗೆ 8 ಗಂಟೆಯಿಂದ ಸಾರ್ವಜನಿಕರು ದರ್ಶನಕ್ಕೆ ಬರಬಹುದು. ರಾತ್ರಿ 11 ಗಂಟೆವರೆಗೂ ದರ್ಶನ ಇರುತ್ತದೆ. ಬೆಳಗ್ಗೆ ಮತ್ತು ಸಂಜೆ ಕಲ್ಯಾಣೋತ್ಸವ ಇರುತ್ತದೆ.